ADVERTISEMENT

ಮದ್ಯದ ಹೊಳೆಗೆ ಅಣೆಕಟ್ಟೆ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2013, 7:12 IST
Last Updated 6 ಏಪ್ರಿಲ್ 2013, 7:12 IST

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮದ್ಯ ವಿತರಿಸಿ ಮತದಾರರನ್ನು ಬುಟ್ಟಿಗೆ ಹಾಕಿಕೊಳ್ಳವ ಪರಿಪಾಠವೂ ಹೆಚ್ಚುತ್ತದೆ. ಇದನ್ನು ತಪ್ಪಿಸಲು ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ಚುನಾವಣಾ ಆಯೋಗ ಕೈಗೊಂಡಿದೆ. ಅದನ್ನು ಯಥಾವತ್ತಾಗಿ ಪಾಲಿಸಿದ್ದೇ ಆದರೆ ಮದ್ಯದ ಮೂಲಕ ಮತದಾರರ ಓಲೈಕೆ ಕಷ್ಟಸಾಧ್ಯ. ಆದರೆ ಅದು ನಡೆಯುತ್ತಿಲ್ಲ ಎಂಬುದು ವಾಸ್ತವ.

ಚುನಾವಣೆ ಘೋಷಣೆಯಾದ ತಕ್ಷಣ ದೇಶೀಯ ತಯಾರಿಯ ವಿದೇಶಿ ಮದ್ಯ,  ಬಿಯರ್, ದೇಶೀಯ ಮದ್ಯದ ಉತ್ಪಾದನೆ, ದಾಸ್ತಾನು, ಚಿಲ್ಲರೆ ವ್ಯಾಪಾರ ಮಳಿಗೆಗಳಲ್ಲಿನ ದಾಸ್ತಾನು ಸಹಿತ ಹಲವಾರು ವಿಚಾರಗಳನ್ನು ಜಿಲ್ಲಾ ಮಟ್ಟದಲ್ಲೇ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ. ಮದ್ಯದ ಅಂಗಡಿಗಳನ್ನು ತೆರೆಯುವುದು ಮತ್ತು ಮುಚ್ಚುವುದನ್ನು ಸಹ ಸೂಕ್ಷ್ಮವಾಗಿ ಪರಿಶೀಲಿಸುತ್ತ ಇರಬೇಕು.

ಅಂತರರಾಜ್ಯ ಮದ್ಯ ಸಾಗಾಟ ಈ ಸಮಯದಲ್ಲಿ ಹೆಚ್ಚುತ್ತದೆ. ಹೀಗಾಗಿ ಅಬಕಾರಿ ಇಲಾಖೆಯವರು ಆರ್‌ಟಿಒ ಚೆಕ್‌ಪೋಸ್ಟ್ ಮತ್ತು ರಾಜ್ಯಗಳ ಗಡಿಯಲ್ಲಿರುವ ಚೆಕ್‌ಪೋಸ್ಟ್‌ಗಳಲ್ಲಿ ಹೆಚ್ಚಿನ ನಿಗಾ ವಹಿಸಬೇಕು. ಕಳ್ಳಬಟ್ಟಿ ಸಾರಾಯಿ ಹಾವಳಿ ತಪ್ಪಿಸಲು ಮೇಲಿಂದ ಮೇಲೆ ದಾಳಿಗಳನ್ನು ನಡೆಸಬೇಕು.

ಗಡಿ ಭಾಗಗಳಲ್ಲಿ ಎರಡೂ ರಾಜ್ಯಗಳ ಅಬಕಾರಿ ಇಲಾಖೆಯ ಅಧಿಕಾರಿಗಳು ಮಾಹಿತಿ ವಿನಿಮಯ ಮಾಡಿಕೊಳ್ಳುತ್ತ ಅಕ್ರಮ ಮದ್ಯ ಮಾರಾಟವನ್ನು ನಿಗ್ರಹಿಸಬೇಕು. ಒಟ್ಟಾರೆ ಮದ್ಯ ವ್ಯಾಪಾರ, ಅಕ್ರಮ ಮದ್ಯ ಮಾರಾಟ ಸಹಿತ ಎಲ್ಲಾ ಮಾಹಿತಿಗಳನ್ನು ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಎರಡು ದಿನಕ್ಕೊಮ್ಮೆ ಜಿಲ್ಲಾ ಚುನಾವಣಾ ಅಧಿಕಾರಿ, ವೆಚ್ಚ ವೀಕ್ಷಕರು ಮತ್ತು ರಾಜ್ಯ ಮಟ್ಟದ ನೋಡಲ್ ಅಧಿಕಾರಿಗಳಿಗೆ ನೀಡುತ್ತಿರಬೇಕು.

ಚುನಾವಣೆ ಸಂದರ್ಭದಲ್ಲಿ ಕಪ್ಪು ಹಣದ ಅಕ್ರಮ ರವಾನೆಯೂ ನಡೆಯುತ್ತಿರುತ್ತದೆ. ಬ್ಯಾಂಕ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ಹಣ ಹಿಂಪಡೆಯುವಂತಹ ಕಾರ್ಯಗಳು ನಡೆಯುತ್ತದೆ. ಇದರ ಬಗ್ಗೆ ಬ್ಯಾಂಕ್ ಅಧಿಕಾರಿಗಳು ನಿಗಾ ಇಟ್ಟುಕೊಂಡು ಜಿಲ್ಲಾ ಚುನಾವಣಾ ಅಧಿಕಾರಿ ಅವರಿಗೆ ನಿರಂತರ ಮಾಹಿತಿ ನೀಡಬೇಕು ಎಂಬ ನಿಯಮವನ್ನೂ ರೂಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT