ADVERTISEMENT

ಮುಂಗಾರು ಅಬ್ಬರ; ಮನೆಗಳಿಗೆ ಹಾನಿ

ಧರೆಗುರುಳಿದ ವಿದ್ಯುತ್‌ ಕಂಬಗಳು– ವಿದ್ಯುತ್ ವ್ಯತ್ಯಯ

​ಪ್ರಜಾವಾಣಿ ವಾರ್ತೆ
Published 29 ಮೇ 2018, 9:58 IST
Last Updated 29 ಮೇ 2018, 9:58 IST
ನಿಟ್ಟೂರಿನ ಲೀಲಾಬಾಯಿ ಅವರ ಮನೆ ಮಳೆಗೆ ಹಾನಿಗೊಳಗಾಗಿರುವುದು
ನಿಟ್ಟೂರಿನ ಲೀಲಾಬಾಯಿ ಅವರ ಮನೆ ಮಳೆಗೆ ಹಾನಿಗೊಳಗಾಗಿರುವುದು   

ಉಡುಪಿ: ಜಿಲ್ಲೆಯಲ್ಲಿ ಮುಂಗಾರು ಅಬ್ಬರ ಜೋರಾಗಿದ್ದು, ಭಾನುವಾರ ರಾತ್ರಿ ಹಾಗೂ ಸೋಮವಾರ ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಹಲವೆಡೆ ಹಾನಿ ಸಂಭವಿಸಿದೆ. ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಜನಜೀವನ ಅಸ್ತವ್ಯಸ್ಥಗೊಂಡಿದೆ.

ಭಾನುವಾರ ರಾತ್ರಿ 7.30ರ ಸುಮಾರಿಗೆ ಆರಂಭವಾದ ಮಳೆ ಸುಮಾರು ಎರಡೂವರೆ ತಾಸು ನಿರಂತರವಾಗಿ ಸುರಿಯಿತು. ಮಳೆಯ ರಭಸಕ್ಕೆ ರಸ್ತೆಗಳೆಲ್ಲ ಕೆರೆಗಳಂತಾಗಿದ್ದವು.

ಬಿರುಗಾಳಿ ಮಳೆಗೆ ನಗರದ ಹಲವೆಡೆ ಭಾರಿ ಗಾತ್ರದ ಮರಗಳು ಬಿದ್ದಿವೆ. ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವೆಡೆ 200–300 ವರ್ಷಗಳಷ್ಟು ಹಳೆಯ ಮರಗಳು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದೆ.

ADVERTISEMENT

ಮಳೆಯಿಂದಾಗಿ ಭಾನುವಾರ ಹಾಗೂ ಸೋಮವಾರ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ವಿದ್ಯುತ್ ಕಡಿತ
ಗೊಂಡಿತ್ತು. ಮಣಿಪಾಲದ ಈಶ್ವರನಗರ ಮುಖ್ಯರಸ್ತೆಯಲ್ಲಿ ಮರವೊಂದು ಬುಡಸಮೇತ ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಕಂಬಗಳು ಮುರಿದು ಬಿದ್ದವು. ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿತ್ತು.

ಕೊಡಂಕೂರಿನ ಕೆ.ವಿಠಲ್ ಅವರ ಮನೆಯ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಸ್ಥಳಕ್ಕೆ ಶಾಸಕ ಕೆ.ರಘುಪತಿ ಭಟ್‌ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಜತೆಗೆ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿ‘
ಗಳಿಗೆ ಸೂಚಿಸಿದರು. ನಿಟ್ಟೂರಿನ ಲೀಲಾ ಬಾಯಿ ಅವರ ನಿವಾಸದ ಮೇಲೂ ಮರ ಬಿದ್ದಿದ್ದು, ಮನೆಗೆ ಹಾನಿಯಾಗಿದೆ.

ನಗರದ ದೊಡ್ಡಣಗುಡ್ಡೆ, ಅಂಬಾಗಿಲು, ಪೆರಂಪಳ್ಳಿ, ಬ್ರಹ್ಮಗಿರಿ, ಅಜ್ಜರಕಾಡು, ಗುಂಡಿಬೈಲು ಪ್ರದೇಶದಲ್ಲಿ ವಿದ್ಯುತ್‌ ಕಂಬಗಳು ತುಂಡಾಗಿ ಬಿದ್ದು, ಈ ಭಾಗದಲ್ಲಿ ವಿದ್ಯುತ್ ಕಡಿತವಾಗಿತ್ತು.ಒಟ್ಟಾರೆ ಉಡುಪಿಯಲ್ಲಿ 42.7 ಮಿ.ಮೀ., ಕಾರ್ಕಳದಲ್ಲಿ 33.5 ಮಿ.ಮೀ. ಹಾಗೂ ಕುಂದಾಪುರದಲ್ಲಿ 26.8 ಮಿ.ಮೀ. ಮಳೆಯಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.