ADVERTISEMENT

ರಾಸಾಯನಿಕ ತರಕಾರಿ ಅಪಾಯಕಾರಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2012, 8:15 IST
Last Updated 30 ಜುಲೈ 2012, 8:15 IST
ರಾಸಾಯನಿಕ ತರಕಾರಿ ಅಪಾಯಕಾರಿ
ರಾಸಾಯನಿಕ ತರಕಾರಿ ಅಪಾಯಕಾರಿ   

ಉಡುಪಿ: ತರಕಾರಿ, ಹಣ್ಣು ಬೆಳೆಸುವಾಗ ರಾಸಾಯನಿಕ ಎಷ್ಟು ಸಿಂಪಡಿಸಬೇಕು ಎಂಬುದನ್ನು ರೈತ ತಿಳಿಯುವುದರ ಜೊತೆಗೆ ಗ್ರಾಹಕರು ತಿನ್ನುವಾಗ ಕೂಡ ಅಷ್ಟೇ ಜಾಗ್ರತೆ ವಹಿಸಬೇಕು ಎಂದು ಅಡಿಕೆ ಪತ್ರಿಕೆ ಸಹಾಯಕ ಸಂಪಾದಕ ನಾ.ಕಾರಂತ ಪೆರಾಜೆ ಹೇಳಿದರು.

ಜಿಲ್ಲಾ ಕೃಷಿಕ ಸಂಘ, ವಿಜಯ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನ ಮಂಗಳೂರು ಹಾಗೂ ಜಿಲ್ಲಾ ಮಲ್ಲಿಗೆ ಬೆಳೆಗಾರರ ಸಂಘವು ಉಡುಪಿ ರೆಸಿಡೆನ್ಸಿ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಆರೋಗ್ಯ ಮತ್ತು ಸ್ವಾವಲಂಬನೆಗಾಗಿ ಸಾವಯವ ಕೃಷಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಯವ ಕೃಷಿಯಲ್ಲಿ ಕಣ್ಣಿಗೆ ಕಾಣದಂತಹ ಅನೇಕ ಸತ್ಯಗಳಿವೆ. ಸಾವಯವ ಕೃಷಿಯನ್ನು ಎಷ್ಟು ತಿಳಿದುಕೊಂಡು ಮಾಡುತ್ತೇವೆಯೋ ಅಷ್ಟೇ ಪರಿಣಾಮ ಗ್ರಾಹಕರ ಮೇಲೂ ಇದೆ. ಗೋಬಿ ಮಂಚೂರಿಯನ್ನು ತಿನ್ನಲು ರುಚಿಕರವಾದರೆ ಅದಕ್ಕೆ ಬಳಸುವ ಹೂಕೋಸನ್ನು ಬೆಳೆಸುವ ವಿಧಾನ ತಿಳಿದರೆ ಯಾರು ತಿನ್ನಲಿಕ್ಕಿಲ್ಲ.

ಹೂಕೋಸು ಬೆಳೆಗೆ 13 ಬಾರಿ ರಾಸಾಯನಿಕ ಸಿಂಪಡಿಸುತ್ತಾರೆ. ಅದನ್ನು ಕಟಾವು ಮಾಡುವ ಮುಂಚಿತವಾಗಿ ಒಂದು ಬಾರಿ ಸಿಂಪಡಿಸಿದರೆ ಸಾಗಿಸುವಾಗ ಕೂಡ ರಾಸಾಯನಿಕದ ನೀರಿನಿಂದ ಅದ್ದಿ ಸಾಗಿಸುತ್ತಾರೆ. ಅದರ ಪರಿಣಾಮ  ಹೂಕೋಸಿನ ಒಳಒಳಗೆ ಕೀಟಗಳು ಸತ್ತಿರುತ್ತವೆ. ಅದನ್ನು ನೇರವಾಗಿ ಸ್ಟಾಲ್‌ಗೆ ತಂದು ಬಳಸುತ್ತಾರೆ ಎಂದರು.

ಯಾವುದೇ ಹಣ್ಣುಗಳನ್ನು ತಿನ್ನುವಾಗಲೂ ಕೂಡ ಗ್ರಾಹಕ ಜಾಗ್ರತೆ ವಹಿಸಬೇಕು ಏಕೆಂದರೆ ಮಾರುಕಟ್ಟೆಯಲ್ಲಿ ಇಂದು ತಂದ ಕಾಯಿಯನ್ನು ರಾಸಾಯನಿಕ ಬಳಸಿ ನಾಳೆಗೆ ಹಣ್ಣು ಮಾಡಿಕೊಡುವ ಹಣ್ಣನ್ನು ತಿಂದರೆ ಅದು ಮನುಷ್ಯನ ಬದುಕನ್ನು ಕೂಡ ಹಣ್ಣು ಮಾಡುತ್ತವೆ ಎಂಬುದನ್ನು ಜನರು ತಿಳಿಯಬೇಕು. ತರಕಾರಿ ಬೆಳೆಗೆ ಎಷ್ಟು ಬಾರಿ ರಾಸಾಯನಿಕ ಸಿಂಪಡಿಸಬೇಕು ಎನ್ನುವುದರ ಬಗ್ಗೆ ರೈತರು ತಿಳುವಳಿಕೆ ಪಡೆದುಕೊಳ್ಳಬೇಕು, ಆಗ್ರೋ ಅಂಗಡಿಯವರ ಲಾಭಗೋಸ್ಕರ ರೈತರು ರಾಸಾಯನಿಕಕ್ಕೆ ಮಾರು ಹೋಗದಂತೆ ರೈತರಿಗೆ ಎಚ್ಚರಿಕೆ ನೀಡಿದರು. 

ಮಂಗಳೂರು ವಿಜಯ ಗ್ರಾಮೀಣಾಭಿವೃದ್ದಿ ಪ್ರತಿಷ್ಠಾನದ  ಮುಖ್ಯ ಕಾರ್ಯ ನಿರ್ವಾಹಣಾ ಅಧಿಕಾರಿ ಕುಮಾರ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮ,ಕುದಿ ಶ್ರೀನಿವಾಸ್ ಭಟ್, ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.