ADVERTISEMENT

ಶಿವರಾಮ ಕಾರಂತರ ನೆನಪುಗಳ ತಿಲ್ಲಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2012, 8:50 IST
Last Updated 8 ಅಕ್ಟೋಬರ್ 2012, 8:50 IST

ಕೋಟ(ಬ್ರಹ್ಮಾವರ): ಡಾ.ಕಾರಂತರ ಕೃತಿಗಳ ಅಧ್ಯಯನ, ದೃಶ್ಯ ರೂಪಕಗಳ ಮೂಲಕ ಅಭಿನಯ, ಧ್ವನಿ ಮುದ್ರಿಕೆಗಳ ಅರಿವು ಹೀಗೆ ಕಾರಂತರ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಸಲುವಾಗಿ ಉಡುಪಿಯ ಡಾ.ಶಿವರಾಮ ಕಾರಂತ ಟ್ರಸ್ಟ್, ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಠಾನದ ಸಾರಥ್ಯದಲ್ಲಿ ಕೋಟದ ಕಲಾಭವನದಲ್ಲಿ ಡಾ.ಕಾರಂತ ಬದುಕಿನ ಪುಟಗಳ ಅನಾವರಣಾ ಶಿಬಿರ ಸಮೀಕ್ಷೆ- 2012 ನೆನಪುಗಳ ತಿಲ್ಲಾನಕ್ಕೆ ಭಾನುವಾರ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಸಾಲಿ ಗ್ರಾಮ ಡಾ.ಕಾರಂತ ಸಂಶೋಧನಾ ಮತ್ತು ಅಧ್ಯಯನ ಸಂಸ್ಥೆಯ ಅಧ್ಯಕ್ಷೆ ಬಿ.ಮಾಲಿನಿ ಮಲ್ಯ ಮಕ್ಕಳ ಮೇಲೆ ಸದಾ ಪ್ರೀತಿ ಆಸಕ್ತಿಯಿದ್ದ ಕಾರಂತರು ಮಕ್ಕಳಲ್ಲಿ ಹಿರಿಯರನ್ನು ಅನುಸರಿಸದೇ ಇರಲು ಹೇಳುತ್ತಿದ್ದರು. ಮಕ್ಕಳನ್ನು ಸುಸಂಸ್ಕೃತ ಪ್ರಜೆಗಳನ್ನಾಗಿ ಮಾಡುವ ಕನಸು ಹೊತ್ತಿದ್ದರು ಎಂದರು.

ಆಂಗ್ಲ ಭಾಷೆಯ ವ್ಯಾಮೋಹ ಇಂದಿನ ಪೋಷಕರಲ್ಲಿ ಹೆಚ್ಚಿದೆ. ಪೋಷಕರು ಪ್ರಶಸ್ತಿ, ಪ್ರಚಾರದ ಗೀಳಿಗೆ ಹೋಗದೇ ತಮ್ಮ ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಅಭಿರುಚಿ ಬೆಳೆಸಿದಲ್ಲಿ ಅವರ ಜ್ಞಾನ ಬೆಳೆದು ಸುಸಂಸ್ಕೃತರಾಗಿ ಸಮಾಜದಲ್ಲಿ ಬಾಳುತ್ತಾರೆ. ಎಂಜಿನಿಯರ್, ಸಾಫ್ಟ್‌ವೇರ್ ಆಗಬೇಕೆನ್ನುವ ಇಚ್ಛೆಯನ್ನು ಬಿಟ್ಟು ಅಧ್ಯಾಪಕ, ಉಪನ್ಯಾಸಕರಾಗಲು ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಪೋಷಕರಿಗೆ ಅವರು ಸಲಹೆ ನೀಡಿದರು.

ಕೋಟತಟ್ಟು ಗ್ರಾ.ಪಂ ಅಧ್ಯಕ್ಷ ರಘು ತಿಂಗಳಾಯ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಸಾಲಿಗ್ರಾಮ ಮಕ್ಕಳ ಮೇಳದ ಅಂಚಾಲಕ ಶ್ರೀಧರ್ ಹಂದೆ,  ಕದ್ರಿಕಟ್ಟು ರಸರಂಘ ಸುಧಾ ಮಣೂರು, ಸುಶೀಲಾ ಸೋಮಶೇಖರ್, ಡಾ.ಕಾರಂತ ಹುಟ್ಟೂರ  ಪ್ರಶಸ್ತಿ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ.ಕುಂದರ್,  ಬ್ರಹ್ಮಾವರ ವಲಯ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ಸುದೇಶ್ ನಾಯಕ್, ಕಾರ್ಯದರ್ಶಿ ಸತೀಶ ಪೂಜಾರಿ ಕೊಂಡಾಡಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರ ನಾಯರಿ, ನಿಶಾ ಗುಲ್ವಾಡಿ ಮತ್ತಿತರರು ಉಪಸ್ಥಿತರಿದ್ದರು. ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ಅಧ್ಯಾಪಕ ನರೇಂದ್ರ ಕುಮಾರ್ ಸ್ವಾಗತಿಸಿದರು. 

 ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್, ಕೋಟ ಸಮರ್ಪಣಾ, ಮಣೂರು ಅಶ್ವಿನಿ ಸ್ಮಾರಕ ಕೇಂದ್ರ, ಕೋಟ ಇನಿದನಿ, ರಸರಂಗ ಕದ್ರಿಕಟ್ಟು, ವಾಹಿನೀ ಪಡುಕೆರೆ ಸಂಸ್ಥೆಗಳು ಕಾರ್ಯಕ್ರಮವನ್ನು ಆಯೋಜಿಸಿದೆ.
ಭಾನುವಾರ ಸಂಜೆ ಸುಧಾ ಮಣೂರು ನಿರ್ದೇಶನದಲ್ಲಿ ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾರ್ಥಿನಿಯರಿಂದ ಬಾಗಿಲು ತೆರೆಯೇ ಗುಬ್ಬಕ್ಕ ನಾಟಕ ನಡೆಯಿತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.