ಉಡುಪಿ: ಶುಶ್ರೂಷಕಿಯರ ವೃತ್ತಿ ತುಂಬಾ ಪವಿತ್ರವಾದುದು. ಪ್ರತಿಯೊಂದು ಆಸ್ಪತ್ರೆಯಲ್ಲೂ ಆ ಹುದ್ದೆಗೆ ಅಪಾರ ಬೇಡಿಕೆ ಇದೆ ಎಂದು ವೈದ್ಯಕೀಯ ಅಧೀಕ್ಷಕಿ ಡಾ.ಕೆ.ವಿ. ಮಮತಾ ಹೇಳಿದರು.
ಧರ್ಮಸ್ಥಳ ಮ೦ಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಈಚೆಗೆ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರೋಗಿಯ ಜೊತೆಗೆ ಮೊದಲಿಗೆ ಮುಖಾಮುಖಿ ಆಗುವ ದಾದಿಯರಿಗೆ ನಿರಂತರ ತರಬೇತಿ ಮುಖ್ಯ. ವೃತ್ತಿಪರತೆ ಹೆಚ್ಚಿಸುವ ಶೈಕ್ಷಣಿಕ ತರಬೇತಿ ಕಾರ್ಯಕ್ರಮಗಳು ಅವರ ಮಿತಿ ಮೀರಿ ಕಾರ್ಯನಿರ್ವಹಿಸಲು ಮತ್ತು ಅರಿವು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತವೆ. ದಕ್ಷ ದಾದಿಯರಿಂದ ರೋಗಿಗಳಿಗೆ ಸಿಗುವ ಸೇವೆಯ ಗುಣಮಟ್ಟವೂ ಹೆಚ್ಚುತ್ತದೆ ಎಂದು ಹೇಳಿದರು.
ಪ್ರಾಂಶುಪಾಲ ಡಾ. ಶ್ರೀಕಾಂತ್ ಮಾತನಾಡಿ, ಶುಶ್ರೂಷಕರಿಲ್ಲದಿದ್ದರೆ ರೋಗಿಗಳ ಪರಿಸ್ಥಿತಿ ಹೇಗಿರುತ್ತದೆ ಎಂದು ಊಹಿಸಿಕೊಂಡರೆ ಭಯ ವಾಗುತ್ತದೆ. ಈ ವೃತ್ತಿಯನ್ನು ಸೇವಾಮನೋಭಾವದಿಂದ ಆಯ್ಕೆ ಮಾಡಿಕೊಳ್ಳಬೇಕು.
ಆಸ್ಪತ್ರೆಗೆ ಬರುವ ರೋಗಿಗಳು ಮಾನಸಿಕ ಮತ್ತು ದೈಹಿಕವಾಗಿ ಬಳಲಿರುತ್ತಾರೆ. ಅವರನ್ನು ಕರುಣೆ, ಪ್ರೀತಿ ಮತ್ತು ವಿಶ್ವಾಸದಿಂದ ಕಂಡು ಉಪ ಚರಿಸಬೇಕು. ಅದೇ ಅವರಿಗೆ ಸಂಜೀವಿನಿಯಾಗಲಿದೆ. ಇದರಿಂದ ಅವರು ಬಹುಬೇಗ ಗುಣಮುಖರಾಗುತ್ತಾರೆ. ಅಂತಯೇ ಸಾರ್ವಜನಿಕರು ಶೂಶ್ರುಷಕೀಯರ ಜತೆ ಗೌರವದಿಂದ ವರ್ತಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ದಾದಿಯರನ್ನು ಅಭಿನಂದಿಸಲಾಯಿತ್ತು. ಡಾ. ನಿರಂಜನ್ ರಾವ್, ಡಾ. ರಜನೀಶ, ಡಾ. ಕೆ.ಆರ್. ರಾಮಚಂದ್ರ ಉಪಸ್ಥಿತರಿದ್ದರು. ಡಾ. ಸುಧೀಂದ್ರ ಹೊನವಾಡ ಕಾರ್ಯಕ್ರಮದ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.