ಉಡುಪಿ: ಸಂಸ್ಕಾರ ಹೀನ ಮಾನವ ಪ್ರಾಣಿಗಳಿಗೆ ಸಮಾನ. ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಮಹತ್ವದ ಜವಾಬ್ದಾರಿ ಮಠಗಳ ಮೇಲಿದೆ ಎಂದು ಆನೆಗುಂದಿ ಸರಸ್ವತಿ ಮಠದ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು.
ಅವರ ಪಟ್ಟಾಭಿಷೇಕ ಮಹೋತ್ಸವದ ಅಷ್ಟಮ ವರ್ಧಂತ್ಯುತ್ಸವದ ಅಂಗವಾಗಿ ಇತ್ತೀಚೆಗ ಆಯೋಜಿಸಿದ್ದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಠಗಳನ್ನು ಬೆಳೆಸುವ ಮಹತ್ವದ ಜವಾಬ್ದಾರಿ ಇಂದಿನ ಸಮಾಜದ ಮೇಲೆ ಇದೆ. ಇವೆರಡು ಒಂದೇ ನಾಣ್ಯದ ಎರಡು ಮೂಖಗಳು. ಒಂದನ್ನು ಬಿಟ್ಟರೆ ಇನ್ನೊಂದಕ್ಕೆ ಅಸ್ತಿತ್ವವಿಲ್ಲ ಎಂದು ತಿಳಿಸಿದರು.
ವೈದಿಕ ಸಂಪ್ರದಾಯದ ಅರಿವು ಮೂಡಿಸಲು ಪ್ರತಿ ವರ್ಷ ವೈದಿಕ ಶಿಬಿರವನ್ನು ಸಂಸ್ಥಾನ ನಡೆಸುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಕಾಷ್ಠ ಶಿಲ್ಪಿ ಎಂ. ಪದ್ಮನಾಭ ಆಚಾರ್ಯ ಚಿಟ್ಪಾಡಿ, ಮಂಚಿ ಉಡುಪಿ, ಕಾಷ್ಠ ಶಿಲ್ಪಿ ಬಿ.ಕೆ ಧನಂಜಯ ಆಚಾರ್ಯ ಏನೆಕಲ್ ಸುಳ್ಯ, ವಾಸ್ತು ಶಿಲ್ಪಿ ಪುರುಷೋತ್ತಮ ಆಚಾರ್ಯ ನೀಲೇಶ್ವರ, ಎರಕ ಶಿಲ್ಪಿ ಜನಾರ್ದನ ಆಚಾರ್ಯ ಚೊಕ್ಕಾಡಿ ಕಟಪಾಡಿ, ಎರಕ ಶಿಲ್ಪಿ ಬಿಳಿಯಾರು ಗಣಪತಿ ಆಚಾರ್ಯ ಶಂಕರಪುರ, ಶಿಲಾ ಶಿಲ್ಪಿ ಸೇಸಪ್ಪ ಆಚಾರ್ಯ ಅತ್ತೂರು ಕಾರ್ಕಳ, ವೈದಿಕದಲ್ಲಿ ವೇದಮೂರ್ತಿ ಬ್ರಹ್ಮಶ್ರೀ ಪುರೋತ ಶ್ರೀಧರ ಶರ್ಮ ಕಟಪಾಡಿ, ಚಿತ್ರಕಲೆ ಲಕ್ಷ್ಮೀಶ ಆಚಾರ್ಯ ಕಾಸರಗೋಡು, ಭರತನಾಟ್ಯ ವಿದುಷಿ ಮಂಜುಳಾ ಸುಬ್ರಹ್ಮಣ್ಯ, ಯಕ್ಷಗಾನ ಎಂ.ಕೆ. ರಮೇಶ ಆಚಾರ್ಯ ತೀರ್ಥಹಳ್ಳಿ, ಶೈಕ್ಷಣಿಕ ಶ್ರೀಮತಿ ಕೃಷ್ಣವೇಣಿ ಆರ್. ಬೆಂಗಳೂರು, ನಿವೃತ್ತ ಮುಖ್ಯೋಪಾಧ್ಯಾಯ ರಾಜು ಅವರನ್ನು ಸನ್ಮಾನಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.