ADVERTISEMENT

ಸೇತುವೆ ವಿವಾದ: ಪ್ರತಿಭಟನೆಗೆ ವಿರಾಮ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:02 IST
Last Updated 17 ಸೆಪ್ಟೆಂಬರ್ 2013, 9:02 IST

ಕೊಡೇರಿ (ಬೈಂದೂರು): ಕೊಡೇರಿ ಮೀನುಗಾರಿಕಾ ಬಂದರಿನ ಉದ್ದೇಶಿತ ಸೇತುವೆಯನ್ನು ಜೆಟ್ಟಿಯ ಬಳಿಯೇ ನಿರ್ಮಿಸಬೇಕೆಂದು ಆಗ್ರಹಿಸಿ ಮೀನು­ಗಾರರು ನಡೆಸುತ್ತಿದ್ದ ಪ್ರತಿಭಟನೆಯನ್ನು ಭಾನುವಾರ ಸ್ಥಗಿತಗೊಳಿಸಲಾಯಿತು.

ಅಧಿಕಾರಿಗಳು ಸ್ಥಳಕ್ಕಾಗಮಿಸಿ, ನಿವೇಶನ ಬದಲಾವಣೆ ಕುರಿತು ಉನ್ನತ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ನೀಡಿದ ಭರವಸೆ ಅನುಸರಿಸಿ ಪ್ರತಿಭಟನೆ ನಿಲ್ಲಿಸಲಾಯಿತು.

ಶನಿವಾರ ಆರಂಭವಾದ ಪ್ರತಿಭಟನೆ ಭಾನುವಾ­ರವೂ ಮುಂದುವರಿದಿತ್ತು. ಹಿಂದಿನ ಉಸ್ತುವಾರಿ ಸಚಿವರು ಮತ್ತು ಶಾಸಕರು ಜೆಟ್ಟಿಯಿಂದ 500 ಮೀಟರ್‌ ಅಂತರದಲ್ಲಿ ಸೇತುವೆ ನಿರ್ಮಿಸುವ ಆಶ್ವಾಸನೆ ನೀಡಿದ್ದರು. ಆದರೆ ಈಗ ಏಕಾಏಕಿ ಸ್ಥಳ ಬದಲಾಯಿಸಲಾಗಿದೆ. ಅದಕ್ಕೆ ತಾವು ಎಡೆಕೊಡುವುದಿಲ್ಲ ಎನ್ನುವುದು ಇಲ್ಲಿನ ಮೀನುಗಾರರ ನಿಲುವು. ಪ್ರತಿಭಟನೆ ಮುಂದುವರಿದ ಹಿನ್ನೆಲೆಯಲ್ಲಿ ಪೊಲೀಸ್‌ ವೃತ್ತ ನಿರೀಕ್ಷಕ ಅರುಣ್‌ ಬಿ. ನಾಯಕ್‌ ಮತ್ತು ಎಸ್‌ಐ ಸುನಿಲ್‌ಕುಮಾರ್‌ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್‌ ಏಪರ್ಡಿಸಲಾಗಿತ್ತು.

ಸ್ಥಳಕ್ಕಾಗಮಿಸಿದ ಬಂದರು ಮತ್ತು ಮೀನುಗಾರಿಕಾ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ. ಎಸ್‌. ರಾಥೋಡ್‌ ಮತ್ತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಎನ್‌. ಎಂ. ಖಾರ್ವಿ ಮೀನುಗಾರ­ರೊಂದಿಗೆ ಮಾತುಕತೆ ನಡೆಸಿದರು. ನಿವೇಶನ ಬದಲಿಸುವ ನಿರ್ಧಾರ ಕೈಗೊಳ್ಳುವ ಅಧಿಕಾರ ತಮಗಿಲ್ಲ. ಉನ್ನತ ಅಧಿಕಾರಿಗಳಿಗೆ ಈ ಕುರಿತು ಸೂಕ್ತ ವರದಿ ಸಲ್ಲಿಸಲಾಗುವುದು ಎಂಬ ಭರವಸೆ ನೀಡಿದರು. ಅದನ್ನು ಅನುಸರಿಸಿ ಪ್ರತಿಭಟನೆ ನಿರತರು ಒಂದು ತಿಂಗಳ ಗಡುವು ನೀಡಿ ಪ್ರತಿಭಟನೆ ನಿಲುಗಡೆಗೊಳಿಸಿದರು.

ಶಾಸಕರ ಹೇಳಿಕೆ: ಇದಕ್ಕೆ ಮುನ್ನ ಎಂಜಿನಿಯರ್‌ ಬೈಂದೂರಿನಲ್ಲಿ ಶಾಸಕ ಕೆ. ಗೋಪಾಲ ಪೂಜಾರಿ ಅವರಿಗೆ ಮೀನುಗಾರರ ಬೇಡಿಕೆ ಮತ್ತು ಸೇತುವೆ ನಿವೇಶನ ಬದಲಾವಣೆಗೆ ಇರುವ ತಾಂತ್ರಿಕ ತೊಡಕುಗಳನ್ನು ವಿವರಿಸಿದರು. ಇದಕ್ಕೆ ಉತ್ತರಿಸಿದ ಅವರು ಇದು ಹಿಂದಿನ ಸರ್ಕಾರ ಕೈಗೊಂಡ ಯೋಜನೆ. ಇದರಲ್ಲಿ ತಾವು ಮಧ್ಯ ಪ್ರವೇಶಿಸಲು ಬಯಸುವುದಿಲ್ಲ. ಆದರೆ ಸೇತುವೆಯನ್ನು ಎಲ್ಲಿಯೇ ಮಾಡುವುದಾದರೂ ತಮ್ಮ ಆಕ್ಷೇಪವಿಲ್ಲ. ಅದಕ್ಕೆ ಪೂರಕವಾಗಿ ಶಿಫಾರಸಿನ ಅಗತ್ಯವಿದ್ದರೆ ಅದನ್ನು ಕೊಡಲು ತಾವು ಸಿದ್ಧ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.