ADVERTISEMENT

ಹಗರಣ ಆರೋಪ ತನಿಖೆಗೆ ಸಿದ್ಧ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2012, 8:25 IST
Last Updated 15 ಅಕ್ಟೋಬರ್ 2012, 8:25 IST
ಹಗರಣ ಆರೋಪ ತನಿಖೆಗೆ ಸಿದ್ಧ
ಹಗರಣ ಆರೋಪ ತನಿಖೆಗೆ ಸಿದ್ಧ   

ಹೆಬ್ರಿ: ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಸಹಿಸದ ವ್ಯಕ್ತಿಗಳು ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದ್ದು, ಯಾವುದೇ ಆರೋಪಗಳ ಸಮಗ್ರ ತನಿಖೆಗೆ ಕಾಂಗ್ರೆಸ್ ಸದಾ ಸಿದ್ಧ ಎಂದು ಕೇಂದ್ರ ಸಚಿವ ಸಚಿವ ಎಂ.ವೀರಪ್ಪ ಮೊಯಿಲಿ ಹೇಳಿದರು.

ಹೆಬ್ರಿಯ ಶೀಲಾ ಸುಭೋಧ ಬಲ್ಲಾಳ್ ಬಂಟರ ಭವನದಲ್ಲಿ ಭಾನುವಾರ ಹೆಬ್ರಿ ಮತ್ತು ಕಾರ್ಕಳ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೋನಿಯಾ ಅವರಿಂದಾಗಿ ಕಾಂಗ್ರೆಸ್ ಎರಡು ಬಾರಿ ಅಧಿಕಾರಕ್ಕೆ ಬಂದಿದೆ. 2014ರ ಚುನಾವಣೆಯಲ್ಲೂ ಅಧಿಕಾರಕ್ಕೆ ಬಂದು ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ಮೊಯಿಲಿ ಭವಿಷ್ಯ ನುಡಿದರು. ಗಾಂಧಿ ನಡಿಗೆ ಕಾರ್ಯಕ್ರಮದ ಮೂಲಕ ಪ್ರತಿ ವಾರ್ಡ್‌ನ 10 ಯುವಕರ ಸಾಮರ್ಥ್ಯ ಬಳಸಿ ಪಕ್ಷವನ್ನು ಬಲಪಡಿಸಲು ವಿಶೇಷ ಯತ್ನ ನಡೆಯುತ್ತಿದೆ ಎಂದರು.

ಆಹಾರ ಭದ್ರತೆ, ಚಿಲ್ಲರೆ ಮಾರಾಟ ಸೇರಿದಂತೆ ಬಡವರ ಪರವಾದ ಯಾವುದೇ ಕಾನೂನು ಯೋಜನೆಯ ಅನುಷ್ಠಾನಕ್ಕೆ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ಎಫ್‌ಡಿಐಯಿಂದ ಕೃಷಿಕರು ಮತ್ತು ಶ್ರಿಮಂತರಿಗೆ ಅನುಕೂಲವಾಗಲಿದೆ. ಇದು ಬಿಜೆಪಿ ವ್ಯವಸ್ಥಿತ ಅಪಪ್ರಚಾರ ಎಂದು ಹೇಳಿದರು.

ಅಡ್ವಾಣಿ ಶ್ಲಾಘನೆ: ಕೇಂದ್ರ ಸರ್ಕಾರದ ಮಹತ್ವದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಿಜೆಪಿ ಲಾಲ್‌ಕೃಷ್ಣ ಅಡ್ವಾಣಿಯವರೇ ವಿದೇಶದಲ್ಲಿ ನಡೆದ ಸಭೆಯಲ್ಲಿ ಶ್ಲಾಘಿಸಿದ್ದಾರೆ ಎಂದು ಮೊಯಿಲಿ ಹೇಳಿದರು.

ಸಂಸದ ಕೆ.ಜಯಪ್ರಕಾಶ ಹೆಗ್ಡೆ ಮಾತನಾಡಿ, ಎಲ್ಲೆಡೆ ಕಾಂಗ್ರೆಸ್‌ನ ಜನಪ್ರತಿನಿಧಿಗಳನ್ನು ಆರಿಸುವ ಮೂಲಕ ನಿರಂತರ ಬದಲಾವಣೆ ತರಬೇಕು. ಹುಲಿ ಯೋಜನೆಯ ಮೂಲಕ ಬಿಜೆಪಿಗರು ಕಾರ್ಕಳದಲ್ಲಿ ಅಪಪ್ರಚಾರ ಮಾಡಿ ಚುನಾವಣಾ ರಾಜಕೀಯ ಮಾಡುತ್ತಿದ್ದಾರೆ. ಆರೋಪಗಳು ಸುಳ್ಳು ಎಂದು ಸಾಬೀತು ಪಡಿಸಲು  ಬಹಿರಂಗ ಚರ್ಚೆಗೆ ಸಿದ್ಧ ಎಂದು ಹೆಗ್ಡೆ ಸವಾಲು ಹಾಕಿದರು.

ಇದೇ ಸಂದರ್ಭದಲ್ಲಿ ಸಚಿವ ಎಂ.ವೀರಪ್ಪ ಮೊಯಿಲಿ ಮತ್ತು ಸಂಸದ ಕೆ.ಜಯಪ್ರಕಾಶ ಹೆಗ್ಡೆ ಕಾಂಗ್ರೆಸ್ ಹಿರಿಯ ಮುಖಂಡ ರಾಧಾಕೃಷ್ಣ ನಾಯಕ್ ಅವರ ನಿವಾಸಕ್ಕೆ ತೆರಳಿ ಆರೋಗ್ಯ ವಿಚಾರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.