ADVERTISEMENT

ಹೊಸ ಪ್ರಾದೇಶಿಕ ಪಕ್ಷಕ್ಕೆ ಚಿಂತನೆ: ಅನುಪಮಾ ಶೆಣೈ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 8:54 IST
Last Updated 4 ಅಕ್ಟೋಬರ್ 2017, 8:54 IST
ಅನುಪಮಾ ಶೆಣೈ
ಅನುಪಮಾ ಶೆಣೈ   

ಪಡುಬಿದ್ರಿ: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರನ್ನು ಜನರ ಕೊಂಡಿಯಾಗಿಸುವ ಉದ್ದೇಶದಿಂದ ರಾಜ್ಯದಲ್ಲಿ ಹೊಸ ಪಕ್ಷ ಸ್ಥಾಪನೆಗೆ ಚಿಂತನೆ ನಡೆಸಲಾಗುತ್ತಿದೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ  ಹೇಳಿದರು.

ಪಡುಬಿದ್ರಿ ಸಮೀಪದ ಉಚ್ಚಿಲದ ಅವರ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಂಗಳವಾರ ಮಾತನಾಡಿ, ‘ಭ್ರಷ್ಟಾಚಾರ ನಿಯಂತ್ರಣ, ಅಸ್ಪೃಶ್ಯತೆ ನಿವಾರಣೆ, ಮಹಿಳಾ ಪರ, ಪರಿಸರ ಸಂರಕ್ಷಣೆ ಉದ್ದೇಶ ಇಟ್ಟುಕೊಂಡು ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ತೀರ್ಮಾನ ಮಾಡಿದ್ದು, ಈಗಾಗಲೇ ಸಮಾನ ಮನಸ್ಕರ ಜತೆ ಸಮಾಲೋಚನಾ ಸಭೆಯನ್ನು ನಡೆಸಲಾಗಿದೆ ಎಂದು ಅವರು ತಿಳಿಸಿದರು.

ಪಕ್ಷ ರಚಿಸುವ ನಿಟ್ಟಿನಲ್ಲಿ ಹಲವು ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳ ಸಮಾನ ಮನಸ್ಕ ಪ್ರಮುಖರನ್ನು ನೇಮಿಸಿ ಸೂಕ್ತ ಸಲಹೆ ಪಡೆಯಲಾಗಿದೆ. ಅ.15ರಂದು ಪಕ್ಷ ರಚನೆ ಬಗ್ಗೆ ಎರಡನೇ ಸಭೆ ನಡೆಯಲಿದೆ. ನವೆಂಬರ್ ಮೊದಲ ವಾರದಲ್ಲಿ ಪಕ್ಷದ ಬಗ್ಗೆ ಅಧಿಕೃತ ಘೋಷಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ADVERTISEMENT

ಹೊಸ ರಾಜಕೀಯ ಪಕ್ಷ ಸ್ಥಾಪನೆ ಮಾಡುವುದು ಸುಲಭದ ಮಾತಲ್ಲ. ಪಕ್ಷ ರಚನೆಯಲ್ಲಿ ಹಲವು ಸವಾಲುಗಳಿದ್ದು, ಎದುರಿಸಲು ಸಿದ್ಧವಾಗಿದ್ದೇನೆ. ಪಕ್ಷ ಸ್ಥಾಪಿಸುವ ದೃಢ ಸಂಕಲ್ಪವನ್ನೂ ಮಾಡಿದ್ದೇನೆ. ಈ ರಾಜಕೀಯ ವ್ಯವಸ್ಥೆಯಲ್ಲಿ ಗೆದ್ದು, ನಮ್ಮಲ್ಲಿನ ಅವ್ಯವಸ್ಥೆ ಸರಿಪಡಿಸಬಹುದು ಎಂಬ ವಿಶ್ವಾಸವಿದೆ.

ಜನರ ಸಲಹೆಗಳನ್ನು ಪಡೆದು, ಅವರು ನೀಡುವ ಮಾರ್ಗದರ್ಶನದಂತೆ ಪಕ್ಷದ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗುವುದು. ಪಕ್ಷಕ್ಕೆ ಅನುಮತಿ ದೊರೆತ ತಕ್ಷಣವೇ ಮುಂಬರುವ ಚುನಾವಣೆಯಲ್ಲಿ ನಿಗದಿತ ಕ್ಷೇತ್ರಗಳಿಂದ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಲಾಗುವುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.