ಮೂಡಿಗೆರೆ: ಮಲೆನಾಡನ್ನು ಜ್ವಲಂತ ಸಮಸ್ಯೆಯಾಗಿ ಕಾಡುತ್ತಿರುವ ಅಡಿಕೆ ಬೆಳೆ ನಿಷೇಧ, ಒತ್ತುವರಿ ಸಮಸ್ಯೆ, ಎಂಡೋಸಲ್ಫಾನ್ ಪೀಡಿತರ ಸಮಸ್ಯೆಗೆ ಧ್ವನಿಯಾಗಬೇಕಾದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕಿದೆ ಎಂದು ಶಾಸಕ ಡಿ.ಎನ್.ಜೀವರಾಜ್ ಕಾರ್ಯಕರ್ತರಿಗೆ ಕರೆ ನೀಡಿದರು.
ಪಟ್ಟಣದ ಚರ್ಚ್ಹಾಲ್ನಲ್ಲಿ ಶುಕ್ರವಾರ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಈ ಬಾರಿಯ ಚುನಾವಣೆ ಸುಳ್ಳು ಮತ್ತು ಸತ್ಯದ ನಡುವೆ ನಡೆಯುತ್ತಿದ್ದು, ಸತ್ಯಕ್ಕೆ ಗೆಲುವಾಗಬೇಕಿದೆ. ಹತ್ತು ವರ್ಷಗಳಿಂದ ಸದಾ ಸುಳ್ಳಿನ ಕಂತೆಯನ್ನು ಜನರಿಗೆ ನಂಬಿಸುತ್ತಿರುವ ಕಾಂಗ್ರೆಸ್ ಸರ್ಕಾರದಿಂದ ದೇಶವನ್ನು ರಕ್ಷಿಸಲು ಬಿಜೆಪಿ ಪಕ್ಷದ ನರೇಂದರ ಮೋದಿಯವರ ಆಡಳಿತ ಅಗತ್ಯವಾಗಿದೆ ಎಂದರು. ಶೋಭಾ ಕರಂದಾ್ಲಜೆ ಅವರು ಕಳೆದ ಎರಡು ವರ್ಷಗಳ ಹಿಂದೆ ರಾಜ್ಯ ಬರಪೀಡಿತವಾಗಿದ್ದರೂ ನಿರಂತರ ವಿದ್ಯುತ್ ನೀಡುವಲ್ಲಿ ಯಶಸ್ವಿಯಾಗಿದ್ದರು, ಆದರೆ ಕಳೆದ ವರ್ಷ ರಾಜ್ಯದಾದ್ಯಂತ ಉತ್ತಮ ಮಳೆಯಾಗಿದ್ದರೂ ಇಂದು ಕತ್ತಲೆಯಲ್ಲಿ ದಿನ ಕಳೆಯುವಂತೆ ಕಾಂಗ್ರೆಸ್ ಸರ್ಕಾರ ಮಾಡಿದೆ ಎಂದು ಆರೋಪಿಸಿದರು. ಸಗೀರ್ ಅಹಮ್ಮದ್ ಅವರ ಕಾಫಿ ತೋಟವನ್ನೇ ಬಿಡದ ಕಾಂಗ್ರೆಸ್ ಸರ್ಕಾರ, ಸಾಮಾನ್ಯ ಜನರ ಸಣ್ಣ ಒತ್ತುವರಿಯನ್ನು ಉಳಿಸುವುದೇ ಎಂದು ಪ್ರಶ್ನಿಸಿದರು.
ಶಾಸಕ ಸಿ.ಟಿ. ರವಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಅತ್ಯಂತ ಬಲಶಾಲಿಯಾಗಿದ್ದು, ಗೆಲುವು ನಿಶ್ಚಿತವಾಗಿದೆ. ಆದರೆ ಕಾರ್ಯಕರ್ತರು ಇಷ್ಟಕ್ಕೆ ಸುಮ್ಮನಾಗದೇ, ಬಿಜೆಪಿ ಆಡಳಿತದ ವೇಳೆಯಲ್ಲಿ ಜಾರಿಗೆ ತರಲಾದ ಜನಪ್ರಿಯ ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಆಡಳಿತಕ್ಕೆ ತರಬೇಕಾಗಿದೆ. ರಾಜಕೀಯದಲ್ಲಿ ಒಂದೇ ಒಂದು ಮತವೂ ಅತ್ಯಮೂಲ್ಯ ಎಂಬುದನ್ನು ಮನಗಂಡು, ಯಾವುದೇ ವೈಮನಸಿದ್ದರೂ ಅದನ್ನು ಬದಿಗೊತ್ತಿ ಎಲ್ಲರೂ ಒಟ್ಟಾಗಿ ಅಭ್ಯರ್ಥಿಯ ಗೆಲುವಿಗೆ ಕಾರಣೀಭೂತರಾಗೋಣ ಎಂದರು.
ಚುನಾವಣೆಯ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮಾತನಾಡಿ, ಅಧಿಕಾರದ ಅವಧಿಯಲ್ಲಿ ಮಹಿಳೆಯರ ಧ್ವನಿಯಾಗಿ ದುಡಿದಿದ್ದೇನೆ, ಮಂಗಳಮುಖಿಯರ ಕಲ್ಯಾಣಕ್ಕಾಗಿ ವಿಧಾನ ಸಭೆಯಲ್ಲಿ ಧ್ವನಿಯೆತ್ತಿ ನ್ಯಾಯ ದೊರಕಿಸಿದ್ದೇನೆ. ಇಲ್ಲಿನ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ರೂಪಿಸಲು ಮೋದಿ ಅವರ ಸರ್ಕಾರ ಅಗತ್ಯವಾಗಿದ್ದು, ಎಲ್ಲಾ ಕಾರ್ಯಕರ್ತರು, ಚುನಾವಣೆಯನ್ನು ತಮ್ಮ ಗೆಲುವು ಎಂದು ಭಾವಿಸಿ ಗೆಲುವಿಗೆ ಶ್ರಮಿಸಬೇಕು ಎಂದು ಮನವಿ ಮಾಡಿದರು. ಸಭೆಯಲ್ಲಿ ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ಎಲ್ಲಾ ಕಾರ್ಯಕರ್ತರು ಒಗ್ಗಟ್ಟಾಗಿದ್ದು, ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂದರು.
ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಪಟ್ಟಣದಲ್ಲಿ ಕಾರ್ಯಕರ್ತರೊಂದಿಗೆ ನಾಯಕರು ರೋಡ್ಶೋ ನಡೆಸಿ ಮತಯಾಚನೆ ಮಾಡಿದರು. ಸಭೆಯಲ್ಲಿ ಬಿಜೆಪಿ ಪದಾಧಿಕಾರಿಗಳಾದ ಎಂ.ಕೆ. ಪ್ರಾಣೇಶ್ ಮಾತನಾಡಿದರು. ರಾಜ್ಯ ಮಂಡಳಿ ಸದಸ್ಯ ಕೆಂಜಿಗೆ ಕೇಶವ್ ಮಲೆನಾಡಿನ ಸಮಸ್ಯೆಗಳ ಬಗ್ಗೆ ವೇದಿಕೆಯಲ್ಲಿ ಮನವರಿಕೆ ಮಾಡಿಕೊಟ್ಟರು. ಪದಾಧಿಕಾರಿಗಳಾದ ಸುರೇಂದ್ರ, ಸುದರ್ಶನ್, ಬಿ.ಎನ್. ಜಯಂತ್, ವಿ.ಕೆ. ಶಿವೇಗೌಡ, ಅರೆಕೂಡಿಗೆ ಶಿವಣ್ಣ, ಎಂ.ಎಸ್. ಶೇಷಗಿರಿ, ದುಂಡುಗ ಪ್ರಮೋದ್ಕುಮಾರ್, ಪುರುಷೋತ್ತಮ, ವಿನೋದ್ಕಣಚೂರು ಮತ್ತು ವಿವಿಧ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.