ADVERTISEMENT

‘ಶಿಕ್ಷಕ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಲ್ಪಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 9:11 IST
Last Updated 17 ಸೆಪ್ಟೆಂಬರ್ 2013, 9:11 IST

ಕೋಟ (ಬ್ರಹ್ಮಾವರ): ಶಿಕ್ಷಕ ವೃತ್ತಿ ಎನ್ನುವುದು ಒಂದು ಪರಿಶುದ್ಧ ಪವಿತ್ರವಾದ ವೃತ್ತಿಯಾಗಿದೆ. ಶಿಕ್ಷಕರು ವಿದ್ಯಾರ್ಥಿಗಳ ಸುಂದರ ಭವಿಷ್ಯ ಬದುಕನ್ನು ರೂಪಿಸುವ ಶಿಲ್ಪಿಗಳಾಗಿರುತ್ತಾರೆ ಎಂದು ರತ್ನಾಕರ ಗುಂಡ್ಮಿ ಹೇಳಿದರು.

ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಕೋಟ ವಿದ್ಯಾಸಂಘದವರಿಂದ ಹಲವು ವರ್ಷಗಳಿಂದ ಆಚರಿಸಲ್ಪಡುತ್ತಿರುವ ಶಿಕ್ಷಕ ದಿನಾಚರಣೆಯ ಅಂಗವಾಗಿ ನಡೆಸಲಾದ ಪರಿಸರದ ಪೋಷಕ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಅಧ್ಯಾಪಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಒಬ್ಬೊಬ್ಬ ವಿದ್ಯಾರ್ಥಿಗಳಲ್ಲೂ ಒಂದೊಂದು ಸುಪ್ತವಾದ ಪ್ರತಿಭೆ ಇರುತ್ತದೆ.  ಶಿಕ್ಷಕರು ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳೆಂದು ತಿಳಿದು ಅವರನ್ನು ಅರಿತು ಬೋಧಿಸಬೇಕು. ಬದಲಾಗುತ್ತಿ­ರುವ ಶಿಕ್ಷಣದ ವ್ಯವಸ್ಥೆಗೆ ಹೊಂದಿಕೊಂಡು ಉತ್ತಮ ನಾಗರಕರನ್ನು ನಿರ್ಮಾಣ ಮಾಡುವ ಮಹತ್ತರ ಜವಾಬ್ದಾರಿ ಶಿಕ್ಷಕರ ಮೇಲಿದೆ  ಎಂದು ಅವರು ತಿಳಿಸಿದರು

ಪರಿಸರದ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಮಣೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಾವಿತ್ರಿ,  ಬನ್ನಾಡಿಯ ಪರಮಹಂಸ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಎಚ್. ವಿಶ್ವನಾಥ ಶೆಟ್ಟಿ,  ಎಡಬೆಟ್ಟು ವಿದ್ಯೋದಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಬಿ.ಪಾಂಡುರಂಗ ಶೆಟ್ಟಿ ಇವರುಗಳನ್ನು ಸನ್ಮಾನಿಸಲಾಯಿತು.

ಕೋಟ ವಿದ್ಯಾಸಂಘದ ಕಾರ್ಯದರ್ಶಿ ಪಿ.ಸುಬ್ರಹ್ಮಣ್ಯ ಉಪಾಧ್ಯ ಕಾಯರ್ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜೊತೆ ಕಾರ್ಯದರ್ಶಿ ಪಿ.ಸೂರ್ಯ­ನಾರಾ­ಯಣ ಹೇರ್ಳೆ, ಮುಖ್ಯೋಪಾಧ್ಯಾಯ ಎಂ.ರಾಮದೇವ ಐತಾಳ್ ಉಪಸ್ಥಿತರಿದ್ದರು.

ಬಾಲಕಿಯರ ಪ್ರೌಶಾಲೆಯ ಮುಖ್ಯೋಪಾ­ಧ್ಯಾಯ ಶ್ರೀಪತಿ ಹೇರ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಎಸ್.ನಾಗೇಶ್ ಶ್ಯಾನುಬಾಗ್ ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು.  

ಅಧ್ಯಾಪಕಿ ಶಾಲಿನಿ ಪ್ರಾರ್ಥಿಸಿದರು. ಉಪಪ್ರಾಂಶುಪಾಲೆ ಗೀತಾ ನಾಯಕ್ ವಂದಿಸಿದರು. ಉಪನ್ಯಾಸಕ ಕೆ.ರಾಜಗೋಪಾಲ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.