ಹಿರಿಯಡಕ: ಇಲ್ಲಿನ ಮಹತೋಭಾರ ಶ್ರೀ ವೀರಭದ್ರಸ್ವಾಮಿ ದೇವಸ್ಥಾನದ ದ್ವಿತೀಯ ಹಂತದ ಜೀರ್ಣೋದ್ಧಾರ ಕೆಲಸದ ಅಂಗವಾಗಿ ಇದೇ 14ರಂದು ಬ್ರಹ್ಮಲಿಂಗೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸ ನಡೆಯಲಿದೆ.
ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಹಿರಿಯಡಕದ ದೇವಸ್ಥಾನವು ತುಳುನಾಡಿನ ಹಲವಾರು ವಿಧದ ವಿಶಿಷ್ಟ ಆರಾಧನಾ ಕ್ಷೇತ್ರಗಳಲ್ಲಿ ಒಂದಾಗಿದ್ದು, ಹಿರಿದಾದ ಆಲಡೆ ಕ್ಷೇತ್ರವಾಗಿದೆ. ಇಲ್ಲಿ ನಡೆಯುವ ಸಿರಿ ಜಾತ್ರೆಗೆ ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ ಸಹಸ್ರಾರು ಭಕ್ತರು ಪಾಲ್ಗೊಳ್ಳುವುದು ವಿಶೇಷ. ಅತಿ ಪುರಾತನವಾದ ದೇವಸ್ಥಾನದ ಸಮಗ್ರ ಜೀರ್ಣೋದ್ಧಾರದ ಅಂಗವಾಗಿ ಪ್ರಥಮ ಹಂತದಲ್ಲಿ ಆದಿ ಬ್ರಹ್ಮಸ್ಥಾನ, ಆದಿನಾಗ ಸ್ಥಾನ, ರಾಜಗೋಪುರ, ನಗಾರಿ ಗೋಪುರ, ವಸಂತಮಂಟಪ, ಪರಿವಾರ ಗಣಶಾಲೆ, ವ್ಯಾಘ್ರಚಾಮುಂಡಿ ಗುಡಿ, ವಿಸ್ತಾರವಾದ ಪಾಕ ಶಾಲೆ ಸಹಿತ ಭೋಜನಶಾಲೆ ಹಾಗೂ ಕಲ್ಯಾಣಮಂಟಪವನ್ನು ಸುಮಾರು ₹ 12.50 ಕೋಟಿ ವೆಚ್ಚದಲ್ಲಿ ಇದೇ ಮೇ ತಿಂಗಳಿನಲ್ಲಿ ಅಭಿವೃದ್ಧಿಪಡಿಸಲಾಗಿತ್ತು.
ಇದೀಗ 2ನೇ ಹಂತದಲ್ಲಿ ಸುಮಾರು ₹ 12 ಕೋಟಿ ವೆಚ್ಚದಲ್ಲಿ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಗರ್ಭಗುಡಿಯ ಸಂಪೂರ್ಣ ಮರು ನಿರ್ಮಾಣ, ವೀರಭದ್ರ ದೇವರ ಗರ್ಭಗುಡಿ ನವೀಕರಿಸಿ ಅದರ ದೀಪಗಳಿಗೆ ₹ 2.5 ಕೋಟಿ ವೆಚ್ಚದಲ್ಲಿ ರಜತ ಕವಚ ಹೊದಿಸುವಿಕೆ, ಪಡುಗೋಪುರ, ಯಾಗಶಾಲೆ, 83 ಅಡಿ ಉದ್ದದ ನೂತನ ಧ್ವಜಸ್ತಂಬ, ಶಿಲಾಮಯ ಸುತ್ತುಪೌಳಿ, ಅಂಬೆಲ, ಸ್ವಾಗತ ಮಂಟಪ, ಕೆರೆಯ ನವೀಕರಣ, ಅರ್ಚಕರ ವಸತಿಗೃಹವನ್ನು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
ಆ ಪ್ರಯುಕ್ತ ಡಿ.4 ರಂದು ಸಾನಿಧ್ಯ ಸಂಕೋಚ ಗೊಳಿಸಿ ಹಳೆಯ ನಿರ್ಮಿತಿಗಳನ್ನು ಬಿಚ್ಚುವ ಪ್ರಕ್ರಿಯೆ ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಗ್ರಾಮ ಸೀಮೆಯ ಸಾವಿರಾರು ಭಕ್ತಾದಿಗಳಿಂದ ಕರಸೇವೆಯ ಮೂಲಕ ನಡೆಯುತ್ತಿದೆ. ಇದೇ 14ರಂದು ಬೆಳಿಗ್ಗೆ 11.50ಕ್ಕೆ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಶ್ರೀ ಬ್ರಹ್ಮಲಿಂಗೇಶ್ವರ ದೇವರ ಗರ್ಭಗುಡಿಯ ಶಿಲಾನ್ಯಾಸದ ಮೂಲಕ ನಿರ್ಮಾಣ ಕಾರ್ಯಗಳು ಆರಂಭವಾಗಲಿದೆ. 2018ರ ಏಪ್ರಿಲ್ 16 ರಿಂದ 26 ರವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.