ಉಡುಪಿ: ಜ್ಞಾನ ಜ್ಯೋತಿ ಆರ್ಥಿಕ ಸಾಕ್ಷರತಾ ಟ್ರಸ್ಟ್ನ ವಿಶ್ವಸ್ಥ ಮಂಡಳಿ ಸಭೆ ಮಣಿಪಾಲದ ಕೇಂದ್ರೀಯ ಕಾರ್ಯಾಲಯದಲ್ಲಿ ಇತ್ತೀಚೆಗೆ ನಡೆಯಿತು.
ಹಿಂದಿನ ಹಣಕಾಸು ವರ್ಷದಲ್ಲಿ ಟ್ರಸ್ಟ್ ನಡೆಸಿದ ಚಟುವಟಿಕೆಗಳ ಬಗ್ಗೆ ಸಭೆಯಲ್ಲಿ ಅವಲೋಕನ ನಡೆಸಲಾಯಿತು. 2017–18ನೇ ಸಾಲಿನ ಲೆಕ್ಕ ಪತ್ರದ ಮಂಡನೆ ಹಾಗೂ ಆಯವ್ಯಯ ಪಟ್ಟಿ ಅನುಮೋದನೆ ಮತ್ತು 2018–19ನೇ ಸಾಲಿನ ಕಾರ್ಯ ಯೋಜನೆಯನ್ನು ಸಭೆಯಲ್ಲಿ ಅಂಗೀಕಾರ ಮಾಡಲಾಯಿತು.
ಆಡಳಿತ ವಿಶ್ವಸ್ಥ ಐ.ಎನ್. ರಾಘವೇಂದ್ರ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಚಟುಟಿಕೆಗಳ ಬಗ್ಗೆ ಮಾಹಿತಿ ನೀಡಿದ ಅವರು ಸಾಧನೆ ಬಗ್ಗೆ ತೃಪ್ತಿ ವ್ಯಕ್ತಪಡಿಸಿದರು. ಎಂಟು ವರ್ಷದ ಅವಧಿಯಲ್ಲಿ ದೇಶದ ವಿವಿಧೆಡೆ ಟ್ರಸ್ಟಿನ ಕೇಂದ್ರಗಳು ನಡೆಸಿದ ಆರ್ಥಿಕ ಸಾಕ್ಷರತಾ ಕಾರ್ಯಕ್ರಮಗಳಿಂದ 48.81 ಲಕ್ಷ ಜನರು ಪ್ರಯೋಜನ ಪಡೆದಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು.
ಪ್ರಸಕ್ತ ಸಾಲಿನಲ್ಲಿ 22,000 ಕಾರ್ಯಕ್ರಮಗಳ ಮೂಲಕ 21 ಲಕ್ಷಕ್ಕೂ ಹೆಚ್ಚಿನ ಜನರಿಗೆ ಆರ್ಥಿಕ ಸಾಕ್ಷರತೆ ಪಸರಿಸುವ ಮಹತ್ವಾಕಾಂಕ್ಷೆ ಯೋಜನೆಯಿದೆ. 2017–18ರಲ್ಲಿ 22,478 ಕಾರ್ಯಕ್ರಮಗಳ ಮೂಲಕ 10,18,310 ಜನರಿಗೆ ಸಂಪೂರ್ಣ ಉಚಿತವಾಗಿ ಆರ್ಥಿಕ ಸಾಕ್ಷರತೆ ನೀಡಲಾಗಿದೆ. 2014ರಿಂದ ಈಚೆಗೆ ತೆರೆಯಲಾದ ಪ್ರಧಾನ ಮಂತ್ರಿ ಜನ್ಧನ ಖಾತೆ ಸಕ್ರಿಯಗೊಳಿಸಲು, ಈ ಖಾತೆಗಳಿಗೆ ರೂಪೇ ಕಾರ್ಡ್ಗಳನ್ನು ಪಡೆಯಲು ಮತ್ತು ಈಗಾಗಲೇ ಪಡೆದುಕೊಂಡ ಕಾರ್ಡ್ಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಮಾರ್ಗದರ್ಶನ ನೀಡಲಾಗಿದೆ ಎಂದರು.
ಸಮಾಲೋಚಕರು ಗ್ರಾಮೀಣ ಪ್ರದೇಶಗಳ ಬ್ಯಾಂಕುಗಳ ಗ್ರಾಹಕರು ತಮ್ಮ ಖಾತೆಗಳಿಗೆ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಜೋಡಿಸಲು ಸಹಾಯ ಮಾಡಿದ್ದಾರೆ. ರಿಸರ್ವ್ ಬ್ಯಾಂಕಿನ ಆದೇಶದ ಅನ್ವಯ ವಿಶೇಷ ಕಾರ್ಯಕ್ರಮಗಳನ್ನು ನಡೆಸಿ ಡಿಜಿಟಲೀಕರಣ ಹಾಗೂ ನಿರ್ದಿಷ್ಟ ಗುಂಪುಗಳಾದ ರೈತರು, ಸಣ್ಣ ಉದ್ದಿಮೆದಾರರು, ಶಾಲಾ ಮಕ್ಕಳು, ಸ್ವಸಹಾಯ ಗುಂಪುಗಳು ಮತ್ತು ಹಿರಿಯ ನಾಗರಿಕರಿಗೆ ಸೂಕ್ತ ಸಾಕ್ಷರತೆಯನ್ನು ಸಹ ನೀಡಲಾಗಿದೆ ಎಂದರು.
ವಿಶ್ವಸ್ಥ ಎಚ್. ಸುರೇಶ್ ಪ್ರಭು, ಡಾ. ರಾಮಚಂದ್ರ ಕಾಮತ್ ಹಾಗೂ ಕಾರ್ಯದರ್ಶಿ ಕೆ. ರವಿರಾಜ ಇವರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.