ಉಡುಪಿ:ಕಡಲ ಅಲೆಗಳ ಅಬ್ಬರವನ್ನೂ ಮೀರಿಸುವಂತೆ ಮಲ್ಪೆ ಕಡಲ ಕಿನಾರೆಯಲ್ಲಿ ಶನಿವಾರ ಸಹಸ್ರಾರು ಕಂಠಗಳಿಂದ ‘ವಂದೇ ಮಾತರಂ’ ಮೊಳಗಿತು.ಜಿಲ್ಲೆಯ 23 ಪದವಿ ಕಾಲೇಜುಗಳ ಸುಮಾರು 3,500ಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಹತ್ತಕ್ಕೂ ಅಧಿಕ ಮಂದಿ ಹಿನ್ನೆಲೆ ಗಾಯಕರು ಒಂದಾಗಿ ಹಾಡುವ ಮೂಲಕ ರಾಷ್ಟ್ರಪ್ರೇಮ, ಹೆಮ್ಮೆಯನ್ನು ಬಡಿದೆಬ್ಬಿಸಿದರು. ಸಾವಿರಾರು ಜನ ಈ ಕಾರ್ಯಕ್ರಮ ವೀಕ್ಷಿಸಿದರು. ಉಡುಪಿಯ ಸಂವೇದನಾ ಪ್ರತಿಷ್ಠಾನದ ವತಿಯಿಂದ ಸ್ವಾಮಿ ವಿವೇಕಾನಂದ ಅವರ 155ನೇ ಜಯಂತಿ ಅಂಗವಾಗಿ ವಿಶ್ವ ದಾಖಲೆಗಾಗಿ ಈ ಕಾರ್ಯಕ್ರಮ ಆಯೋಜಿಸಿತ್ತು.
ಈ ಅಪರೂಪದ ಗಾಯನ ದಾಖಲೆಗೆ ಸಾಕ್ಷಿಯಾದ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ಸಂತೋಷ್ ಅಗರವಾಲ್, ‘ದಾಖಲೆ ಆಗಿದೆ’ ಎಂದು ಘೋಷಣೆ ಮಾಡಿದರು.
ಗಾಯನ ಕಾರ್ಯಕ್ರಮಕ್ಕೂ ಮೊದಲು 1,750 ಅಡಿ ಉದ್ದ ಹಾಗೂ 9 ಅಡಿ ಅಗಲದ ಬೃಹತ್ ರಾಷ್ಟ್ರಧ್ವಜದ ಶೋಭಾಯಾತ್ರೆ ಮಲ್ಪೆಯ ಪ್ರಮುಖ ರಸ್ತೆಗಳಲ್ಲಿ ನಡೆಯಿತು. ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ‘ಭಾರತ್ ಮಾತಾಕಿ ಜೈ’ ಘೋಷಣೆಗಳೊಂದಿಗೆ ಸಾಗಿದ ವಿದ್ಯಾರ್ಥಿಗಳು ಗಮನ ಸೆಳೆದರು. ಆಂಧ್ರಪ್ರದೇಶದ ಸಹರಾ ರೇಡಿಯನ್ಸ್ ಸೊಸೈಟಿ ಸಹಯೋಗದೊಂದಿಗೆ ಈ ಮೆರವಣಿಗೆ ಆಯೋಜಿಸಲಾಗಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.