ಬಾರ್ಕೂರು (ಬ್ರಹ್ಮಾವರ): ಕಚ್ಚೂರು ಗ್ರಾಮದ ಇಬ್ಬರು ಯುವಕರು ಹಾಲೆಕೋಡಿಗೆ ಸಮೀಪದ ಸೀತಾ ನದಿಯಲ್ಲಿ ಶುಕ್ರವಾರ ಮೀನು ಹಿಡಿಯುತ್ತಿದ್ದಾಗ ಸೀತಾ ನದಿ ಕವಲು ಎಂಬಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಬಾರ್ಕೂರು ಹೊಸಾಳ ಗ್ರಾಮದ ಚೌಳಿಕೆರೆ ನಿವಾಸಿಗಳಾದ ಹರ್ಷ (25) ಮತ್ತು ಕಾರ್ತಿಕ್ (21) ಮೃತರು. ಯುವಕರು ಹಿಂದಿನ ರಾತ್ರಿ ನದಿಯಲ್ಲಿ ಮೀನಿಗೆ ಬಲೆ ಹರಡಿ ಹೋಗಿದ್ದರು. ಬೆಳಿಗ್ಗೆ ಬಲೆ ಎತ್ತಿ, ಮೀನು ಸಂಗ್ರಹಿಸಲು ತೆರಳಿದ್ದರು. ನೀರಿಗೆ ಇಳಿದು ಬಲೆಯನ್ನು ಎಳೆಯುತ್ತಿದ್ದ ವೇಳೆ ಮುಳುಗಿ ಸಾವು ಸಂಭವಿಸಿದೆ.
ಎರಡು ಮೂರು ದಿನಗಳಿಂದ ಮಳೆ ಹೆಚ್ಚು ಸುರಿಯುತ್ತಿರುವ ಕಾರಣ ಹೊಳೆಯಲ್ಲಿ ನೀರು ತುಂಬಿ ಹರಿಯುತ್ತಿತ್ತು. ಯುವಕರ ಮೃತದೇಹವನ್ನು ಅಗ್ನಿಶಾಮಕ ದಳ, ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿಯ ಸಹಕಾರದಿಂದ ಮೇಲಕ್ಕೆತ್ತಲಾಯಿತು. ಹರ್ಷ ಖಾಸಗಿ ಫೆನ್ಸಾನ್ಸ್ ಕಂಪನಿಯೊಂದರಲ್ಲಿ ಕೆಲಸದಲ್ಲಿದ್ದರು. ಕಾರ್ತಿಕ್ ಅಂತಿಮ ವರ್ಷದ ಬಿ.ಕಾಂ. ವಿದ್ಯಾರ್ಥಿ ಎಂಬ ಮಾಹಿತಿ ಲಭಿಸಿದೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.