ಉಡುಪಿ: ಭಾವನಾ ಫೌಂಡೇಷನ್ ಹಾವಂಜೆ ಹಾಗೂ ಭಾಸ ಗ್ಯಾಲರಿ ಮತ್ತು ಸ್ಟುಡಿಯೋ ವತಿಯಿಂದ ಜನಪದ ದೇಶೀಯ ಕಲೆಗಳ ಸರಣಿ ಕಾರ್ಯಾಗಾರ ಜ.28ರಿಂದ 30ರವರೆಗೆ ಬಡಗುಪೇಟೆಯ 10.03.28 ನಿವಾಸದಲ್ಲಿ ನಡೆಯಲಿದೆ ಎಂದು ಕಾರ್ಯಾಗಾರದ ಸಂಯೋಜಕ ಡಾ.ಜನಾರ್ದನ ಹಾವಂಜೆ ತಿಳಿಸಿದರು.
ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಚಿತ್ರಕಲಾ ಮಂದಿರ ಕಲಾಶಾಲೆ, ಆರ್ಟಿಸ್ಟ್ ಫೋರಂ ಸಹಯೋಗದಲ್ಲಿ ಕಾರ್ಯಾಗಾರ ಆಯೋಜಿಸಲಾಗಿದ್ದು ಚಿತ್ರಕಲಾ ಮಂದಿರ ಕಲಾಶಾಲೆಯ ನಿರ್ದೇಶಕ ಡಾ.ಯು.ಸಿ.ನಿರಂಜನ್ ಉದ್ಘಾಟಿಸಲಿದ್ದಾರೆ. ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್, ಸಂಸ್ಕೃತಿ ವಿಶ್ವಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಎಚ್.ಪಿ.ರವಿರಾಜ್, ಭಾವನ ಫೌಂಡೇಷನ್ ನಿರ್ದೇಶಕ ಮಂಜುನಾಥಯ್ಯ ಉಪಸ್ಥಿತರಿರಲಿದ್ದಾರೆ.
ಎರಡು ವಿಭಾಗಗಳಲ್ಲಿ ಕಾರ್ಯಾಗಾರ ನಡೆಯಲಿದ್ದು ಉತ್ತರ ಕನ್ನಡ ಭಾಗದ ಹಸೆ ಚಿತ್ತಾರವನ್ನು ಪರಿಚಯಿಸಲಾಗುತ್ತಿದೆ. ಹಿರಿಯ ಕಲಾವಿದೆ ಸಾಗರದ ಗೌರಮ್ಮ ಹಾಗೂ ಭಾಗೀರಥಿ ಹಸೆ ಚಿತ್ರಗಳ ಪಾರಂಪರಿಕ ರಚನಾ ಕ್ರಮ, ತಾಂತ್ರಿಕತೆಗಳನ್ನು ತಿಳಿಸಿಕೊಡಲಿದ್ದಾರೆ. ಜ.30ರಂದು ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ಭಾವನಾ ಕಲಾ ಶಾಲೆಯು ವಿಂಶತಿ ಸಂಭ್ರಮದಲ್ಲಿರುವ ಅಂಗವಾಗಿ ಕಾರ್ಯಾಗಾರ ಆಯೋಜಿಸಲಾಗಿದೆ. ದೇಶದ ತುಂಬೆಲ್ಲ ಹರಡಿಕೊಂಡಿರುವ ವಿಶಿಷ್ಟ ಕಲಾ ಪ್ರಕಾರಗಳನ್ನು ಉಡುಪಿ ಜನರಿಗೆ ತಿಳಿಸುವುದು. ಅಳಿವಿನಂಚಿನಲ್ಲಿರುವ ಕಲೆಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಜನಾರ್ದನ ಹಾವಂಜೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಎಚ್.ಪಿ.ರವಿರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.