ಉಡುಪಿ: ವೇದಾಂತದ ಲೇಪವಿಲ್ಲದೆ ಸಾಹಿತ್ಯವು ಪರಿಪೂರ್ಣವಾಗದು. ವೇದಾಂತ ಲೇಪವಿದ್ದರೆ ಹಿತದಿಂದ ಸಹಿತವಾದ ಸಾಹಿತ್ಯವಾಗುತ್ತದೆ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಶ್ರೀಪಾದರು ಹೇಳಿದರು.
ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಕೃಷ್ಣಮಠದ ರಾಜಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಎ. ಕೇಶವರಾಜ್ ಅವರ ‘ಗೀತಾಂಬುಧಿ ಶ್ರೀಮದ್ಭಗವದ್ಗೀತಾ ಪ್ರೇರಿತ ಕಾವ್ಯ ಶಿಲ್ಪ’ ಕೃತಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಸಾಹಿತ್ಯ ಎಂಬುದು ನಮ್ಮ ವ್ಯಕ್ತಿತ್ವವನ್ನು ಬೆಳೆಸುವ, ನಮ್ಮನ್ನು ಚಿಂತನೆಗೆ ಹಚ್ಚುವಂತಾಗಿರಬೇಕು. ಕೇಶವರಾಜ್ ಅವರ ಕೃತಿಯಲ್ಲಿ ವಿಜ್ಞಾನ, ಸಾಹಿತ್ಯ ಹಾಗೂ ಅಧ್ಯಾತ್ಮ ಮಿಳಿತವಾಗಿದೆ ಎಂದರು.
ಕವಿಯಾಗಬೇಕಾದರೆ ಕೇವಲ ಅಕಾಡೆಮಿಕ್ ಹಿನ್ನೆಲೆ ಇದ್ದರೆ ಸಾಲದು. ಲೋಕಜ್ಞಾನ ಮುಖ್ಯವಾಗಿರಬೇಕು. ಸಾಹಿತ್ಯ, ಕಲೆ ಮನುಷ್ಯ ಜೀವನದಲ್ಲಿ ಮೇಳೈಸಬೇಕು ಹಾಗಿದ್ದರೆ ಮಾತ್ರ ಬದುಕು ಅರ್ಥಪೂರ್ಣವಾಗುತ್ತದೆ ಎಂದು ಪ್ರತಿಪಾದಿಸಿದರು.
ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಬಿ.ಎಸ್. ಶೇರಿಗಾರ್ ಮಾತನಾಡಿ, ವಿಶ್ವದ ಪ್ರಸಿದ್ಧ ವಿಜ್ಞಾನಿಗಳು ತಾವು ಭಾರತೀಯ ವೇದಾಂತದಿಂದ ಪ್ರಭಾವಿತರಾಗಿರುವುದನ್ನು ತಮ್ಮ ಆತ್ಮಕಥೆಗಳಲ್ಲಿ ಉಲ್ಲೇಖಿಸಿದ್ದಾರೆ. ಅಂತಹ ಶಕ್ತಿ ವೇದಾಂತಕ್ಕೆ ಇದೆ ಎಂದು ಹೇಳಿದರು.
ಲೇಖಕಿ ಸಾಯಿಗೀತಾ ಹೆಗ್ಡೆ ಮಾತನಾಡಿ, ಕೇಶವರಾಜ್ ಅವರು ಗೀತೆಗಳ ಸತ್ವವನ್ನು ಕವನಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಅವರ ಕವನಗಳು ಮನಸ್ಸಿಗೆ ಹತ್ತಿರವಾಗುವಂತಹದ್ದು ಎಂದರು.
ಕೃತಿಯ ಲೇಖಕ ಎ. ಕೇಶರಾಜ್ ಅವರು ಮಾತನಾಡಿದರು. ಪರ್ಯಾಯ ಪುತ್ತಿಗೆ ಮಠದ ಕಿರಿಯ ಯತಿ ಸುಶ್ರೀಂದ್ರ ತೀರ್ಥ ಸ್ವಾಮೀಜಿ, ಮಠದ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಭಾಗವಹಿಸಿದ್ದರು. ವಿನುತಾ ಆಚಾರ್ಯ, ಸನ್ನತಿ, ಶಿಲ್ಪ ಮತ್ತು ಬಳಗದವರು ಪ್ರಾರ್ಥನೆ ಹಾಡಿದರು.
ಇಂದು ಪ್ರತಿಯೊಬ್ಬರ ಜೀವನವೂ ದುಡಿಯುವುದು ಮತ್ತು ಹಣ ಸಂಪಾದನೆ ಮಾಡುವುದಕ್ಕೆ ಸೀಮಿತವಾಗಿದೆ. ಬದುಕಿನ ಅನೇಕ ಮಜಲುಗಳ ಕಡೆಗೆ ಗಮನ ಕಡಿಮೆಯಾಗುತ್ತಿದೆ
- ಸುಗುಣೇಂದ್ರತೀರ್ಥ ಪುತ್ತಿಗೆ ಮಠಾಧೀಶ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.