ಬೈಂದೂರು: ಇಂಗ್ಲಿಷ್ ಭಾಷೆಯ ಅಬ್ಬರ, ಪಾಶ್ಚಿಮಾತ್ಯ ಸಂಸ್ಕೃತಿಯ ಅಂಧಾನುಕರಣೆಯ, ಭರ್ಜರಿ ಹಣ ದೋಚುವ ಶಿಶುಪಾಲನಾ ಕೇಂದ್ರಗಳು ಎಲ್ಲೆಡೆ ವಿಜೃಂಭಿಸುತ್ತಿವೆ. ಅವು ಪೋಷಕರಿಗೆ ದಿನದ ಒಂದಷ್ಟು ಹೊತ್ತು ಲಾಲನೆ ಪಾಲನೆ ಭರವಸೆ ನೀಡಬಹುದೇ ಹೊರತು, ಸಂಸ್ಕೃತಿ, ಶಿಷ್ಟಾಚಾರದ ಅರಿವು ನೀಡುವ ಶಿಕ್ಷಣ ಅಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳು ಮಕ್ಕಳ ಪೂರ್ವಪ್ರಾಥಮಿಕ ಶಿಕ್ಷಣಕ್ಕೆ ಉತ್ತಮ ಎಂದು ಶಾಸಕ ಗುರುರಾಜ್ ಗಂಟಿಹೊಳೆ ಹೇಳಿದರು.
ಉಪ್ಪುಂದ ಗ್ರಾಮದ ರಥಬೀದಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
ಉಪ್ಪುಂದ ಗ್ರಾ.ಪಂ. ಅಧ್ಯಕ್ಷ ಮೋಹನಚಂದ್ರ ಅಧ್ಯಕ್ಷತೆ ವಹಿಸಿದ್ದರು. ಈ ಹಿಂದೆ ಅಂಗನವಾಡಿ ಕೇಂದ್ರ ಸ್ಥಾಪನೆ ಮಾಡಲು ಕಾರಣಿಕರ್ತರಾದ ದಿ.ಚಂದು ಗಾಣಿಗ ಅವರ ಪರವಾಗಿ ಪುತ್ರ ರಾಧಾಕೃಷ್ಣ ಗಾಣಿಗ, ಶ್ರೀದುರ್ಗಾ ಫ್ರೆಂಡ್ಸ್ ಅಧ್ಯಕ್ಷ ಮಂಜುನಾಥ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆ ಸುಗುಣ, ಸಹಾಯಕಿ ಭಾರತಿ ಅವರನ್ನು ಸನ್ಮಾನಿಸಲಾಯಿತು. ರಥಬೀದಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಶ್ರೀದುರ್ಗಾ ಫ್ರೆಂಡ್ಸ್ ನೀಡಿದ ಪುಸ್ತಕವನ್ನು ಶಾಸಕ ವಿತರಿಸಿದರು. ಸ್ಪರ್ಧೆಗಳ ವಿಜೇತರಿಗೆ ಬಹುಮಾನ ನೀಡಲಾಯಿತು.
ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಮೋಹನ್ ಪೂಜಾರಿ, ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯು. ಸತೀಶ್ ಶೆಟ್ಟಿ, ಗ್ರಾ.ಪಂ. ಸದಸ್ಯರಾದ ನಾಗರಾಜ ಶೇಟ್, ಪ್ರೇಮಾ ದೇವಾಡಿಗ, ದಿವಾಕರ ಶೆಟ್ಟಿ, ಜಗನ್ನಾಥ ಉಪ್ಪುಂದ, ಜಿ.ಪಂ. ಮಾಜಿ ಸದಸ್ಯೆ ಗೌರಿ ದೇವಾಡಿಗ, ಪಿಡಿಒ ಸುದರ್ಶನ್ ಎಸ್, ಇಲಾಖೆಯ ವಲಯ ಮೇಲ್ವಿಚಾರಕಿ ರೇವತಿ, ಅಂಗನವಾಡಿ ಸಮಿತಿ ಅಧ್ಯಕ್ಷೆ ಪ್ರತಿಮಾ ದೇವಾಡಿಗ, ಮುಖ್ಯಶಿಕ್ಷಕ ಮಂಜುನಾಥ, ಆರೋಗ್ಯ ಕಾರ್ಯಕರ್ತೆ ಸುವರ್ಣ ಭಾಗವಹಿಸಿದ್ದರು. ಅಂಗನವಾಡಿ ಕಾರ್ಯಕರ್ತರಾದ ಸುಗುಣ ಸ್ವಾಗತಿಸಿದರು. ಉಷಾ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.