ADVERTISEMENT

‘ಪರವಶ' ಕಾದಂಬರಿಗೆ ಚಡಗ ಕಾದಂಬರಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 15:02 IST
Last Updated 2 ನವೆಂಬರ್ 2021, 15:02 IST
ದವನ ಸೊರಬ
ದವನ ಸೊರಬ   

ಉಡುಪಿ: ಕೋಟೇಶ್ವರದ ಎನ್‌ಆರ್‌ಎಎಂಎಚ್ ಪ್ರಕಾಶನ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಆಶ್ರಯದಲ್ಲಿ ಕಾದಂಬರಿಕಾರ, ಸಂಘಟಕ ಪಾಂಡೇಶ್ವರ ಸೂರ್ಯನಾರಾಯಣ ಚಡಗರ ನೆನಪಿನಲ್ಲಿ ಕೊಡಮಾಡುವ 12ನೇ ವರ್ಷದ ಚಡಗ ಕಾದಂಬರಿ ಪ್ರಶಸ್ತಿಗೆ ದವನ ಸೊರಬ ಅವರ ‘ಪರವಶ’ ಕಾದಂಬರಿ ಆಯ್ಕೆಯಾಗಿದೆ.

ನವೋದಯದ ಕನ್ನಡ ಕಥೆಗಾರಿಕೆಗೆ ಬಹು ಹತ್ತಿರದ ಲಾಲಿತ್ಯ, ಮಲೆನಾಡಿನ ಬದುಕಿನ ಹೃದಯವಂತಿಕೆ ಹಾಗೂ ಮರೆಯಾಗುತ್ತಿರುವ ಮಲೆನಾಡಿನ ಹಳ್ಳಿಗಾಡಿನ ಪಾತ್ರಗಳನ್ನು ಹದಗೆಡದಂತೆ ‘ಪರವಶ' ಕಾದಂಬರಿ ರಚಿಸಲಾಗಿದೆ. ದವನ ಸೊರಬ ಅವರ ಮೂರನೆ ಕಾದಂಬರಿ ಇದಾಗಿದೆ. ಮನೆತನದ ದುರಂತವನ್ನು ನಿಸರ್ಗ ನಾಶದಿಂದಾಗುವ ದುರಂತದ ಪರ್ಯಾಯ ವಾಚಕವಾಗಿ ಚಿತ್ರಿಸಿರುವ ಸಹಜ ಸೊಬಗನ್ನು ಗುರುತಿಸಿ ಕಾದಂಬರಿಯನ್ನು ಚಡಗ ಕಾದಂಬರಿ ಪುರಸ್ಕಾರಕ್ಕೆ ಆಯ್ಕೆಮಾಡಲಾಗಿದೆ ಎಂದು ಸಂಚಾಲಕ ಪ್ರೊ.ಉಪೇಂದ್ರ ಸೋಮಯಾಜಿ ತಿಳಿಸಿದ್ದಾರೆ.

ಪ್ರಶಸ್ತಿಯು ಸ್ಮರಣಿಕೆ ಹಾಗೂ ₹ 10,000 ನಗದು ಪುರಸ್ಕಾರ ಒಳಗೊಂಡಿದ್ದು, ನವೆಂಬರ್‌ನಲ್ಲಿ ಕೋಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ADVERTISEMENT

ಚಡಗರ ಸಾಹಿತ್ಯ ಒಡನಾಡಿಯಾಗಿದ್ದ ಹಿರಿಯ ಲೇಖಕಿ ಪ್ರೇಮಾ ಭಟ್ ಅವರ ಜೀವಮಾನ ಸಾಧನೆ ಪರಿಗಣಿಸಿ ಅವರಿಗೆ ‘ಚಡಗ ಸಂಸ್ಮರಣಾ ಪುರಸ್ಕಾರ' ನೀಡಲಾಗುತ್ತಿದೆ ಎಂದು ಪ್ರಶಸ್ತಿ ಸಮಿತಿಯ ಅಧ್ಯಕ್ಷ ಡಾ. ಭಾಸ್ಕರ ಆಚಾರ್ಯ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.