ADVERTISEMENT

ಅಪಹರಣಗೊಂಡಿದ್ದ ಮಗು ಕುಮಟಾದಲ್ಲಿ ಪತ್ತೆ

ಉಡುಪಿ ನಗರ ಠಾಣೆ ಪೊಲಿಸರಿಂದ ಆರೋಪಿ ಪರಶುರಾಮನ ಬಂಧನ; ವಿಚಾರಣೆ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 16:09 IST
Last Updated 12 ಜುಲೈ 2021, 16:09 IST
   

ಉಡುಪಿ: ಬಾಗಲಕೋಟೆ ಮೂಲದ ದಂಪತಿಯ ಎರಡೂವರೆ ವರ್ಷದ ಮಗುವನ್ನು ಅಪಹರಿಸಿ ಪರಾರಿಯಾಗಿದ್ದ ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಕುಮಟಾದ ರೈಲ್ವೆ ನಿಲ್ದಾಣದಲ್ಲಿ ಆರೋಪಿ ಪರಶುರಾಮನನ್ನು ಬಂಧಿಸಲಾಗಿದೆ.

ಮಗು ಸುರಕ್ಷಿತವಾಗಿದ್ದು, ಯಾವ ಉದ್ದೇಶಕ್ಕೆ ಆರೋಪಿ ಮಗುವನ್ನು ಅಪಹರಣ ಮಾಡಿದ್ದ ಎಂದು ವಿಚಾರಣೆ ನಡೆಸಲಾಗುತ್ತಿದೆ ಎಂದು ಉಡುಪಿ ನಗರಠಾಣೆ ಪಿಎಸ್‌ಐ ಅಶೋಕ್ ಕುಮಾರ್ ಮಾಹಿತಿ ನೀಡಿದರು.

ಪ್ರಕರಣದ ವಿವರ

ADVERTISEMENT

ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಅರುಣ್ ಹಾಗೂ ಭಾರತಿ ದಂಪತಿಯು ಮಗ ಶಿವರಾಜ್‌ನೊಂದಿಗೆ ಉಡುಪಿಯ ಕರಾವಳಿ ಬೈಪಾಸ್ ಬಳಿಯ ಶೆಡ್‌ವೊಂದರಲ್ಲಿ ವಾಸವಿದ್ದರು. ಈಚೆಗೆ ದಂಪತಿಗೆ ಪರಿಚಿತವಾಗಿದ್ದ ಆರೋಪಿ ಪರಶುರಾಮ, ಮಗುವಿನ ಜತೆ ಸಲುಗೆ ಬೆಳೆಸಿಕೊಂಡಿದ್ದ.

ಭಾನುವಾರ ಬೆಳಿಗ್ಗೆ ತಿಂಡಿಕೊಡಿಸುವುದಾಗಿ ಮಗುವನ್ನು ಕರೆದೊಯ್ದು ಮರಳಿ ಕರೆತಂದಿರಲಿಲ್ಲ. ಪೋಷಕರು ಮಗು ನಾಪತ್ತೆಯಾಗಿರುವ ಬಗ್ಗೆ ನಗರ ಠಾಣೆಗೆ ದೂರು ನೀಡಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆಯಕಟ್ಟಿನ ಜಾಗಗಳಲ್ಲಿರುವ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿ ಮಗುವನ್ನು ಎತ್ತಿಕೊಂಡು ಕುಂದಾಪುರ ಮಾರ್ಗದ ಖಾಸಗಿ ಬಸ್‌ ಹತ್ತುತ್ತಿರುವುದು ಕಂಡುಬಂತು.

ಕೂಡಲೇ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರು ಕುಮಟಾದ ರೈಲ್ವೆ ನಿಲ್ದಾಣದ ಬಳಿ ಆರೋಪಿಯನ್ನು ಬಂಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಉಡುಪಿ ನಗರ ಠಾಣೆ ಇನ್‌ಸ್ಪೆಕ್ಟರ್ ಪ್ರಮೋದ್ ಕುಮಾರ್, ಪಿಎಸ್‌ಐ ಅಶೋಕ್ ಕುಮಾರ್, ಎಎಸ್‌ಐ ಜಯಕರ, ಹೆಡ್‌ ಕಾನ್‌ಸ್ಟೆಬಲ್‌ ಸುಷ್ಮಾ ಹಾಗೂ ಮಯ್ಯಾಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.