ಕಾರ್ಕಳ: ಕೇಂದ್ರ ಅಗ್ನಿಪಥ ಹೆಸರಲ್ಲಿ ಸೇನೆಗೆ ಅಲ್ಪಾವಧಿ ನೆಲೆಯ ಗುತ್ತಿಗೆ ಆಧಾರದ ನೇಮಕಾತಿ ಯೋಜನೆ ಹಮ್ಮಿಕೊಂಡಿರುವುದು ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದರು.
ಲಿಖಿತ ಪರೀಕ್ಷೆ ಮುಗಿಸಿ ನೇಮಕಾತಿ ಪ್ರಕ್ರಿಯೆಗಾಗಿ ಕಾಯುತ್ತಿರುವವರಿಗೆ ಇದು ನಿರಾಶೆ ತಂದಿದೆ. ದೇಶದಲ್ಲಿ ಕೋವಿಡ್ –19, ನಿರುದ್ಯೋಗ, ಆರ್ಥಿಕ ಹಿಂಜರಿತದ ನಡುವೆಯೂ ತನ್ನ ವೈಯಕ್ತಿಕ ಪ್ರತಿಷ್ಠೆಗಾಗಿ ‘ನಮೋ ಟ್ರಂಪ್’ ಹೆಸರಲ್ಲಿ ಸರ್ಕಾರ ನೂರಾರು ಕೋಟಿ ಖರ್ಚು ಮಾಡಿತ್ತು. ಕಳೆದ 2 ವರ್ಷಗಳಿಂದ ಅದೇ ಕಾರಣ ಮುಂದಿಟ್ಟು ಸೇನಾಪಡೆಗೆ ನೇಮಕಾತಿ ಮಾಡದೇ ಇರುವ ಔಚಿತ್ಯ ಸರಿಯಲ್ಲ. ಮೋದಿ ಸರ್ಕಾರ ತನ್ನ ಆಡಳಿತ ವೈಫಲ್ಯದ ಕಾರಣವಾಗಿ ದೇಶವನ್ನು ಅಗ್ನಿಪಥಕ್ಕೆ ತಳ್ಳಿ ಅಭಿವೃದ್ಧಿಗೆ ಕೊಳ್ಳಿ ಇಟ್ಟಿದೆ. ಅಗ್ನಿಪಥ ಯೋಜನೆ ದೇಶದ ಸೇನೆಯಲ್ಲಿ ಸೇವೆ ಮಾಡಬೇಕೆಂಬ ಈ ದೇಶದ ಯುವಕರ ರಾಷ್ಟ್ರಾಭಿಮಾನದ ಕೆಚ್ಚನ್ನು ಕೆರಳಿಸಿದೆ.
ಈ ಅವೈಜ್ಞಾನಿಕ ಯೋಜನೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ದೇಶದಾದ್ಯಂತ ಯುವಕರು ಉಗ್ರ ಪ್ರತಿಭಟನೆ ಮಾಡುತ್ತಿರುವುದರ ಹೊರತಾಗಿಯೂ, ಸರ್ಕಾರ ಸೇನಾ ಪಡೆಯ ಮುಖ್ಯಸ್ಥರ ಮೂಲಕ ಯೋಜನೆಯನ್ನು ಹಿಂಪಡೆಯುವುದಿಲ್ಲ ಎಂಬ ಹೇಳಿಕೆ ಕೊಡಿಸುವ, ಬೆದರಿಸುವ ತಂತ್ರಗಾರಿಕೆಗೆ ಶರಣಾಗಿರುವುದು ಸಾಂವಿಧಾನಿಕ ಉಲ್ಲಂಘನೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.