ADVERTISEMENT

ಪಂಚರಾಜ್ಯ ಚುನಾವಣೆ ಮೋದಿಗೆ ಎಚ್ಚರಿಕೆ ಘಂಟೆ

ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2018, 18:29 IST
Last Updated 13 ಡಿಸೆಂಬರ್ 2018, 18:29 IST
ಪೇಜಾವರ ಶ್ರೀ
ಪೇಜಾವರ ಶ್ರೀ   

ಉಡುಪಿ: ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಚ್ಚರಿಕೆಯ ಗಂಟೆ ಎಂದು ಪೇಜಾವರ ಮಠದ ವಿಶ್ವೇಶ್ವತೀರ್ಥ ಸ್ವಾಮೀಜಿ ಹೇಳಿದರು.

ಗುರುವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಪ್ರಧಾನಿ ಮೋದಿ ಬಗ್ಗೆ ಮೊದಲಿದ್ದ ನಿರೀಕ್ಷೆಗಳು ಈಗ ಜನರಲ್ಲಿ ಕಾಣುತ್ತಿಲ್ಲ. ದೇಶದಲ್ಲಿ ನಿರೀಕ್ಷೆಯಷ್ಟು ಕೆಲಸಗಳು ನಡೆದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮೋದಿ ಆರ್ಥಿಕ ಸುಧಾರಣೆಗೆ ಹಾಗೂ ರಾಮಮಂದಿರ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಹಿಂದೂ ಮತದಾರರ ಉತ್ಸಾಹ ಹೆಚ್ಚಲಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಕಲವಾಗಲಿದೆ ಎಂದು ಶ್ರೀಗಳು ಸಲಹೆ ನೀಡಿದರು.

ADVERTISEMENT

ಎನ್‌ಡಿಎ ಮೈತ್ರಿಕೂಟವನ್ನು ಉಳಿಸಿಕೊಳ್ಳಲು ಕೇಂದ್ರ ಸರ್ಕಾರ ರಾಮಮಂದಿರ ನಿರ್ಮಾಣ ನಿರ್ಧಾರದಿಂದ ಹಿಂದೆ ಸರಿಯಲೂಬಹುದು. ಈ ವಿಚಾರವಾಗಿ ಸಮಾನ ವಿಚಾರಧಾರೆಗಳಿರುವ ಮಿತ್ರಪಕ್ಷಗಳ ಜತೆ ಉತ್ತಮ ಬಾಂಧವ್ಯ ಹೊಂದುವುದು ಅವಶ್ಯ ಎಂದು ಪೇಜಾವರ ಶ್ರೀಗಳು ಕಿವಿಮಾತು ಹೇಳಿದರು.

ಮೋದಿಯವರೇ ಮುಂದಿನ ಪ್ರಧಾನಿಯಾಗಬೇಕು. ಯೋಗಿ ಆದಿತ್ಯನಾಥ್ ಮೋದಿಯವರಷ್ಟು ಸಮರ್ಥರಲ್ಲ. ಯೋಗಿ ರಾಜಕಾರಣಿಯಲ್ಲ; ಸಂತ ಎಂದು ಹೇಳಿದರು.

ಆಂಧ್ರ ಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ವಿರೋಧ ಕಟ್ಟಿಕೊಂಡರೆ ಬಿಜೆಪಿಗೆ ನಷ್ಟವಾಗಲಿದೆ. ಈ ವಿಚಾರದಲ್ಲಿ ಹಿಂದೆ, ವಾಜಪೇಯಿ ಅವರು ಅನುಸರಿಸಿದ ರಾಜಕೀಯ ನೀತಿಯನ್ನು ಅನುಸರಿಸಬೇಕು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.