ADVERTISEMENT

ಕೋಟದ ಮಾಣೂರು ಜೋಡಿ ಕೊಲೆ ಪ್ರಕರಣ: ಇಬ್ಬರು ಡಿಎಆರ್ ಕಾನ್‌ಸ್ಟೇಬಲ್‌ಗಳ ಬಂಧನ

ಬಂಧಿತರ ಸಂಖ್ಯೆ 8ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:14 IST
Last Updated 11 ಫೆಬ್ರುವರಿ 2019, 14:14 IST

ಉಡುಪಿ: ಕೋಟದ ಮಾಣೂರಿನಲ್ಲಿ ಜ.26ರಂದು ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ನೆರವು ನೀಡಿದ ಆರೋಪದ ಮೇಲೆ ಇಬ್ಬರು ಡಿಎಆರ್ ಕಾನ್‌ಸ್ಟೆಬಲ್‌ಗಳನ್ನು ಬಂಧಿಸಲಾಗಿದೆ.

ಪವನ್ ಅಮಿನ್ ಹಾಗೂ ವಿರೇಂದ್ರ ಅಚಾರ್ಯ ಬಂಧಿತರು. ಇಬ್ಬರಿಗೂ ಫೆ.15ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.‌

ಬಂಧನ ಆಗಿದ್ದು ಹೇಗೆ?

ADVERTISEMENT

ಜೋಡಿ ಕೊಲೆ ಆರೋಪಿಗಳಾದ ಹರೀಶ್ ರೆಡ್ಡಿ, ರಾಜಶೇಖರ ರೆಡ್ಡಿ, ಮಹೇಶ್‌ ಗಾಣಿಗ, ಸಂತೋಷ್ ಕುಂದರ್ ಜತೆ ಕಾನ್‌ಸ್ಟೆಬಲ್‌ಗಳಾದ ಪವನ್ ಅಮಿನ್ ಹಾಗೂ ವೀರೇಂದ್ರ ಆಚಾರ್ಯ ಹಲವು ವರ್ಷಗಳಿಂದ ಒಡನಾಟ ಹೊಂದಿದ್ದರು.

ಜ.26ರಂದು ಭರತ್ ಮತ್ತು ಯತೀಶ್ ಅವರನ್ನು ಕೊಲೆ ಮಾಡಿದ ಆರೋಪಿಗಳಿಗೆ ಪವನ್ ಅಮೀನ್ ಹೆಬ್ರಿಯ ಕುಚ್ಚೂರಿನಲ್ಲಿರುವ ತನ್ನ ಮನೆಯಲ್ಲಿ ರಾತ್ರಿ ಮಲಗಲು ವ್ಯವಸ್ಥೆ ಮಾಡಿದ್ದರು. 27ರಂದು ಆರೋಪಿ ಹರೀಶ್ ರೆಡ್ಡಿಗೆ ಸಿಮ್‌, ಮೊಬೈಲ್‌, ಹಣ ಸೇರಿದಂತೆ ಕೆಲವು ವಸ್ತುಗಳನ್ನು ಆಪ್ತನ ಮೂಲಕ ತಲುಪಿಸಿದ್ದರು ಎಂದು ಎಸ್‌ಪಿ ಪ್ರಕರಣದ ಮಾಹಿತಿ ನೀಡಿದರು.

28ರಂದು ಮತ್ತೊಬ್ಬ ಕಾನ್‌ಸ್ಟೆಬಲ್‌ವೀರೇಂದ್ರ ಆಚಾರ್ಯ ಜತೆಗೆ ಸೇರಿಕೊಂಡು ಆರೋಪಿಗಳಿಗೆ ಕಾರಿನ ವ್ಯವಸ್ಥೆ ಮಾಡಿ, ಎನ್‌ಆರ್‌ ಪುರದ ಮಲ್ಲಂದೂರಿನಲ್ಲಿರುವ ಸಂಬಂಧಿಗಳ ಮನೆಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದ್ದರು. ಬಳಿಕ ಆರೋಪಿಗಳು ಕೊಟ್ಟ ಮೊಬೈಲ್‌ ಸೇರಿದಂತೆ ಹಲವು ವಸ್ತುಗಳನ್ನು ಬಚ್ಚಿಡಲು ನೆರವಾಗಿದ್ದರು ಎಂದು ಎಸ್‌ಪಿ ತಿಳಿಸಿದರು.

ಪ್ರಕರಣದ ಹಾದಿ..

ಕೋಟ ಅವಳಿ ಕೊಲೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಜ.7ರಂದುಮಡಿಕೇರಿಯಲ್ಲಿ ರಾಜಶೇಖರ ರೆಡ್ಡಿ, ಜಿ.ರವಿ ಅಲಿಯಾಸ್ ಮೆಡಿಕಲ್‌ ರವಿ ಎಂಬುವರನ್ನು ಬಂಧಿಸಲಾಗಿತ್ತು. ಆರೋಪಿಗಳು ನೀಡಿದ ಸುಳಿವಿನ ಮೇರೆಗೆ 8ರಂದು ಜಿಲ್ಲಾ ಪಂಚಾಯ್ತಿ ಸದಸ್ಯ ರಾಘವೇಂದ್ರ ಕಾಂಚನ್‌ನನ್ನು ಬಂಧಿಸಲಾಗಿತ್ತು. ಬಳಿಕ ಅದೇದಿನ ಬೆಳಗಿನ ಜಾವ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿಹರೀಶ್‌ ರೆಡ್ಡಿ, ಮಹೇಶ್‌ ಗಾಣಿಗ, ರವಿಚಂದ್ರ ಪೂಜಾರಿಯನ್ನು ಬಂಧಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.