ADVERTISEMENT

ರಾಜ್ಯದ ಮೀನುಗಾರರು ಮಹಾರಾಷ್ಟ್ರ ಪೊಲೀಸರ ವಶಕ್ಕೆ

ಮಲ್ಪೆಯಿಂದ ಮೀನುಗಾರಿಕೆಗೆ ಹೊರಟಿದ್ದ ಶ್ರೀಲಕ್ಷ್ಮೀ ಬೋಟ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 9:14 IST
Last Updated 13 ಫೆಬ್ರುವರಿ 2020, 9:14 IST

ಉಡುಪಿ: ಉಡುಪಿ: ಮಲ್ಪೆಯಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಶ್ರೀಲಕ್ಷ್ಮೀ ಬೋಟ್ ಹಾಗೂ 7 ಮಂದಿ ಮೀನುಗಾರರನ್ನು ಮಹಾರಾಷ್ಟ್ರದ ಮಾಲ್ವಾನ್‌ ಗಡಿಯಲ್ಲಿ ಕೋಸ್ಟ್‌ಗಾರ್ಡ್‌ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಮೀನುಗಾರರಾದ ಭಟ್ಕಳದ ರಾಮ, ವೆಂಕಟೇಶ್‌, ಕುಮಟಾದ ಗಣಪತಿ, ವಿನಾಯಕ, ಹೊನ್ನಾವರದ ಮಂಜು ಮಂಕಿ, ಗೋವಿಂದ ಮಂಕಿ, ಅಂಕೋಲಾದ ರಾಜು ಎಂಬುವರನ್ನು ವಶಕ್ಕೆ ಪಡೆದು, ದೇವಘಡ್‌ ಬಂದರಿಗೆ ಕರೆದೊಯ್ಯಲಾಗಿದೆ.

ಕುಂದಾಪುರದ ಅಂಕಿತ್ ಶೆಟ್ಟಿ ಬೋಟ್‌ನ ಮಾಲೀಕರಾಗಿದ್ದು, ಫೆ.2ರಂದು ಬೋಟ್‌ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಬೋಟ್ ಹಾಗೂ ಮೀನುಗಾರರ ವಶ ಸಂಬಂಧ ಮಹಾರಾಷ್ಟ್ರ ಕೋಸ್ಟ್‌ಗಾರ್ಡ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಲಾಗಿದೆ ಎಂದು ಕರಾವಳಿ ಕಾವಲುಪಡೆಯ ಎಸ್‌ಪಿ ಚೇತನ್ ಪ್ರಜಾವಾಣಿಗೆ ಮಾಹಿತಿ ನೀಡಿದರು.

ADVERTISEMENT

ಶ್ರೀಲಕ್ಷ್ಮೀ ಬೋಟ್‌ ಹಾಗೂ ಏಳು ಮೀನುಗಾರರನ್ನು ಮಹಾರಾಷ್ಟ್ರದಲ್ಲಿ ವಶಕ್ಕೆ ಪಡೆದಿರುವುದು ಖಂಡನೀಯ ಎಂದು ಟ್ರಾಲ್ ಬೋಟ್‌ ಚಾಲಕರ ಸಂಘದ ಅಧ್ಯಕ್ಷ ಸಂಘದ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಗಡಿಯಿಂದ ಹೊರಗೆ, ದೇಶದ ಗಡಿಯೊಳಗೆ ಮೀನುಗಾರಿಕೆ ಮಾಡುತ್ತಿದ್ದ ಬೋಟ್‌ ಅನ್ನು ಮಾಲ್ವಾನ್‌ ಮೀನುಗಾರರು ಅಡ್ಡಗಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ರಾಜ್ಯದ ಮೀನುಗಾರರು ನಿಯಮದಂತೆ ಮೀನುಗಾರಿಕೆ ನಡೆಸುತ್ತಿದ್ದರೂ ವಶಕ್ಕೆ ತೆಗೆದುಕೊಂಡಿರುವುದು ಖಂಡನೀಯ ಎಂದು ರವಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.