ADVERTISEMENT

ಸಸ್ಯ ಸಂಪತ್ತಿನಿಂದ ಆರೋಗ್ಯವಂತ ಸಮಾಜ

ಬಾಳೆ ಮುಹೂರ್ತ ಸಭಾ ಕಾರ್ಯಕ್ರಮದಲ್ಲಿ ವಿಶ್ವಪ್ರಿಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2018, 12:44 IST
Last Updated 14 ಡಿಸೆಂಬರ್ 2018, 12:44 IST
ಕಾರ್ಯಕ್ರಮದಲ್ಲಿ ಅದಮಾರು ಮಠದ ವಿಶ್ವ ಪ್ರಿಯ ಸ್ವಾಮೀಜಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅದಮಾರು ಮಠದ ವಿಶ್ವ ಪ್ರಿಯ ಸ್ವಾಮೀಜಿ ಮಾತನಾಡಿದರು.   

ಉಡುಪಿ: ಶ್ರೀಕೃಷ್ಣಮಠದ ಐತಿಹಾಸಿಕ ಪರ್ಯಾಯ ಮಹೋತ್ಸವ ಆರಂಭವಾಗುವುದೇ ಕೃಷಿಯ ಮೂಲಕ. ಸಸ್ಯಸಂಪತ್ತಿನಿಂದ ಆರೋಗ್ಯವಂತ ಸಮಾಜ ನಿರ್ಮಾಣವಾಗುತ್ತದೆ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ತಿಳಿಸಿದರು.

ಶುಕ್ರವಾರ ಅದಮಾರು ಮಠದ ಆವರಣದಲ್ಲಿ ಆಯೋಜಿಸಿದ್ದ ಪರ್ಯಾಯ ಪೂರ್ವಭಾವಿ ಬಾಳೆ ಮುಹೂರ್ತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀಗಳು, ಗೋಪಾಲ ಶ್ರೀಕೃಷ್ಣ ಗೋವುಗಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಗೋವುಗಳ ಅಂಬಾ ಶಬ್ದವೂ ಆರೋಗ್ಯಕ್ಕೆ ಪೂರಕ ಎಂಬ ವಿಚಾರ ದ್ವಾಪರ ಯುಗದಲ್ಲಿತ್ತು ಎಂಬ ಉಲ್ಲೇಖಗಳಿವೆ ಎಂದರು.

ದ್ವಾಪರಯುಗ ಮುಗಿಯುತ್ತಿದಂತೆ ಕಾಡುಗಳ ವಿನಾಶ ಆರಂಭವಾಗಿದೆ. ಇದನ್ನು ಮನಗಂಡ ಮಧ್ವಚಾರ್ಯರು ದ್ವಾರಕೆಯಿಂದ ಕೃಷ್ಣನ ಮೂರ್ತಿಯನ್ನು ತಂದು ಉಡುಪಿಯಲ್ಲಿ ಪ್ರತಿಷ್ಠಾಪಿಸಿ, ಎರಡು ತಿಂಗಳ ಪರ್ಯಾಯವನ್ನು ಆರಂಭಿಸಿದರು ಎಂದು ಪರ್ಯಾಯದ ಹಿನ್ನೆಲೆನ್ನು ತಿಳಿಸಿದರು.

ADVERTISEMENT

ಮಧ್ವಚಾರ್ಯರ ಬಳಿಕ ವಾದಿರಾಜ ಆಚಾರ್ಯರು ಎರಡು ತಿಂಗಳಿಗೊಮ್ಮೆ ನಡೆಯುತ್ತಿದ್ದ ಪರ್ಯಾಯ ವ್ಯವಸ್ಥೆಯನ್ನು ಎರಡು ವರ್ಷಗಳಿಗೆ ವಿಸ್ತರಿಸಿದರು. ಅಲ್ಲದೆ, ಪರ್ಯಾಯ ಎನ್ನುವುದು ಶ್ರೀ ಕೃಷ್ಣಮಠಕ್ಕೆ ಮಾತ್ರ ಸಿಮೀತವಾಗಬಾರದು, ಅದು ಸಾಮಾಜಿಕವಾಗಿ ನಡೆಯಬೇಕು ಎಂಬ ದೃಷ್ಠಿಯಿಂದ ಸಮಾಜದ ಹೊರಗೆ ತಂದರುಎಂದರು

ಕೃಷ್ಣಪೂಜೆ ಬೇಕಾಗಿರುವ ತುಳಸಿ, ಭಕ್ತರ ಊಟಕ್ಕೆ ಬೇಕಾಗುವ ಬಾಳೆ ಎಲೆ ಹಾಗೂ ವಿಘ್ನ ಬರಬಾರದು ಎಂಬ ಕಾರಣಕ್ಕೆ ಗಣಪತಿಯ ಆರಾಧನೆಗೆ ಕಬ್ಬನ್ನು ಬೆಳೆಯುವುದು ಸಂಪ್ರದಾಯ. 600 ವರ್ಷಗಳ ಹಿಂದೆ ವಾದಿರಾಜ ಆಚಾರ್ಯರು ಆರಂಭಿಸಿದ ಈ ಪದ್ಧತಿಯನ್ನು ಅಷ್ಟಮಠಗಳು ಚಾಚೂ ತಪ್ಪದೆ ಅನುಸರಿಸಿಕೊಂಡು ಬರುತ್ತಿವೆ. ಮಠ ಅಂದಕೂಡಲೇ ಜನರಲ್ಲಿ ಕೃಷ್ಣನ ಚಿಂತನೆಗಳು ಬರಬೇಕೆಂಬ ದೃಷ್ಟಿಯಿಂದ ಇಂತಹ ವಿಶಿಷ್ಟ ಪದ್ಧತಿಗಳನ್ನು ಅನುಸರಿಸಿಕೊಂಡು ಬರಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.