ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ಕೆಲವೆಡೆ ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಕಾಪು ವ್ಯಾಪ್ತಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿದೆ.
ಗುರುವಾರ ಬೆಳಿಗ್ಗೆಯಿಂದ ಮಳೆಯ ಅಬ್ಬರ ತಗ್ಗಿದ್ದು, ದಿನವಿಡೀ ಬಿಟ್ಟು ಬಿಟ್ಟು ಸಾಧಾರಣ ಮಳೆ ಸುರಿದಿದೆ. ಭಾರಿ ಮಳೆಯಿಂದಾಗಿ ನಗರ ವ್ಯಾಪ್ತಿಯ ಕನ್ನರ್ಪಾಡಿ ದೇವಸ್ಥಾನದಿಂದ ಕಿದಿಯೂರು ಕಡೆಗೆ ಹೋಗುವ ರಸ್ತೆಯಲ್ಲಿ ಸೇತುವೆ ಉಕ್ಕಿ ಹರಿದು ವಾಹನ ಸಂಚಾರ ಸ್ಥಗಿತಗೊಂಡಿತ್ತು.
ಕುಂದಾಪುರ, ಹೆಬ್ರಿ, ಬೈಂದೂರು ವ್ಯಾಪ್ತಿಯಲ್ಲೂ ಭಾರಿ ಮಳೆ ಸುರಿದಿದೆ. ಕೆಲವೆಡೆ ಹೊಳೆಗಳು ಉಕ್ಕಿ ಹರಿದು ಕೃಷಿಭೂಮಿ ಜಲಾವೃತವಾಗಿವೆ.
ಗುರುವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ ಕಳೆದ 24 ತಾಸುಗಳ ಅವಧಿಯಲ್ಲಿ ಕಾರ್ಕಳ, ಕುಂದಾಪುರದಲ್ಲಿ 8 ಸೆಂ.ಮೀ., ಉಡುಪಿಯಲ್ಲಿ 11 ಸೆಂ.ಮೀ., ಬೈಂದೂರಿನಲ್ಲಿ 7 ಸೆಂ.ಮೀ., ಬ್ರಹ್ಮಾವರದಲ್ಲಿ 11 ಸೆಂ.ಮೀ, ಕಾಪುವಿನಲ್ಲಿ 17 ಸೆಂ.ಮೀ. ಹಾಗೂ ಹೆಬ್ರಿಯಲ್ಲಿ 8 ಸೆಂ.ಮೀ. ಮಳೆಯಾಗಿದೆ.
ಕಾಪು ತಾಲ್ಲೂಕಿನಲ್ಲಿ ನೆರೆ: 29 ಮಂದಿ ಸ್ಥಳಾಂತರ
ಕಾಪು (ಪಡುಬಿದ್ರಿ): ತಾಲ್ಲೂಕಿನ ವಿವಿಧೆಡೆಗಳಲ್ಲಿ ನೆರೆ ಉಂಟಾಗಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿ 29 ಮಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬುಧವಾರ ರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೆ ನಿರಂತರ ಮಳೆಯಾಗಿದ್ದು, ಹೆಜಮಾಡಿ, ಉಚ್ಚಿಲ ಬಡಾ, ಮಲ್ಲಾರು, ಪಾದೆಬೆಟ್ಟು ಗ್ರಾಮಗಳಲ್ಲಿ ನೆರೆ ಬಂದಿದೆ.
ಕಾಪು ತಹಶೀಲ್ದಾರ್ ಪ್ರತಿಭಾ ಆರ್. ಅವರ ಜೊತೆ ಗೃಹರಕ್ಷಕ ದಳದ ಸಿಬ್ಬಂದಿಗಳಾದ ಕುಮಾರ್, ಮಹೇಶ್ ಮತ್ತಿತರರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಮಲ್ಲಾರು ಗ್ರಾಮದಲ್ಲಿ 8 ಜನ, ಹೆಜಮಾಡಿಯಲ್ಲಿ ಓರ್ವ ಮಹಿಳೆ, ಪಾದೆಬೆಟ್ಟಿನಲ್ಲಿ 15 ಜನ, ಉಚ್ಚಿಲ ಬಡಾದಲ್ಲಿ ಐವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ತಹಶೀಲ್ದಾರ್ರು ವೃದ್ಧರ ಮನವೊಲಿಸಿ ಅವರನ್ನು ಸ್ಥಳಾಂತರ ಮಾಡಿಸಿದ್ದಾರೆ.
ಕಂದಾಯ ನಿರೀಕ್ಷಕ ಇಜ್ಜಾರ್ ಸಾಬಿರ್, ಗ್ರಾಮ ಆಡಳಿತಾಧಿಕಾರಿಗಳಾದ ಶ್ರೀಕಾಂತ್, ಮಥಾಯ್, ಹೆಜಮಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಷ್ಮಾ ಮೆಂಡನ್ ಸಹಕರಿಸಿದರು.
ಕಾಪುವಿನ ಪಡು ಗ್ರಾಮದ ಬಹುಪಯೋಗಿ ಆಶ್ರಯತಾಣದಲ್ಲಿ ಸಂತ್ರಸ್ತರಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಪಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾಳಜಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ಹೆಚ್ಚಿನ ಸಂತ್ರಸ್ತರು ಸಂಬಂಧಿಕರ ಮನೆಗೆ ತೆರಳಿರುತ್ತಾರೆ. ಯಾರಾದರೂ ಸಂತ್ರಸ್ತರು ಇಚ್ಚೆಪಟ್ಟರೆ ಕಾಳಜಿ ಕೇಂದ್ರದಲ್ಲಿ ತಂಗಲು ವ್ಯವಸ್ಥೆ ಮಾಡಲಾಗುವುದು ಎಂದು ತಹಶೀಲ್ದಾರ್ ಪ್ರತಿಭಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಸುರಿದ ಭಾರೀ ಮಳೆಗೆ ಕಾಪು ತಾಲ್ಲೂಕು ತತ್ತರಗೊಂಡಿದೆ. ತಾಲ್ಲೂಕು ಆಡಳಿತದ ವತಿಯಿಂದ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದೇವೆ. ಕಾಮಿನಿ ಮತ್ತು ಪಾಪನಾಶಿನಿ ನದಿಗಳ ಹೂಳೆತ್ತಿಸಿ ಸ್ವಚ್ಛಗೊಳಿಸಿದರೆ ನೆರೆಯ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮುಂದಿನ ದಿನಗಳಲ್ಲಿ ನದಿಗಳ ಸ್ವಚ್ಛತಾ ಕಾರ್ಯಕ್ಕೆ ಕ್ರಮ ವಹಿಸಲಾಗುವುದು ಎಂದರು.
ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು, ಕಾಪು, ಉಳಿಯಾರಗೋಳಿ ಹಾಗೂ ಪಾಂಗಾಳದಲ್ಲಿ ಮಳೆಯಿಂದ ಹಲವು ಮನೆಗಳು, ಕೃಷಿ ಭೂಮಿ ಜಲಾವೃತಗೊಂಡಿದೆ.
ಕುಂಜೂರು ಶ್ರೀದುರ್ಗಾ ದೇವಸ್ಥಾನ ಜಲಾವೃತಗೊಂಡಿದ್ದು, ದೇವಸ್ಥಾನದ ಒಳಾಂಗಣ ಮತ್ತು ಹೊರಾಂಗಣದೊಳಗೆ ನೆರೆ ನೀರು ನುಗ್ಗಿದೆ. ಇನ್ನಂಜೆ - ಮರ್ಕೋಡಿ ರಸ್ತೆ, ಬೆಳಪು - ಮೂಳೂರು ರಸ್ತೆ, ಎರ್ಮಾಳು - ಅದಮಾರು ರಸ್ತೆ, ಕರಂದಾಡಿ - ಕಲ್ಲುಗುಡ್ಡೆ ರಸ್ತೆಯಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಕಾಪು ಪಡು ರಾಮನಗರದ ವಸತಿ ಬಡಾವಣೆ, ಬೆಳಪು - ಮೂಳೂರು ಜಾರಂದಾಯ ರಸ್ತೆ ಪಕ್ಕದ ಹಲವು ಮನೆಗಳು ನೀರು ಬಂದಿದೆ. ಉಳಿಯಾರು, ಕರಂದಾಡಿ, ಮಲ್ಲಾರು, ಮೂಳೂರು, ಕೈಪುಂಜಾಲು, ಪಾಂಗಾಳ, ಪೊಲಿಪು, ಕುಂಜೂರು, ಜಲಂಚಾರು, ಕೋತಲಕಟ್ಟೆ, ಇನ್ನಂಜೆ, ಪಡುಬಿದ್ರಿ, ಹೆಜಮಾಡಿ, ಪಲಿಮಾರು, ಎರ್ಮಾಳು ಸಹಿತ ಹೊಳೆ, ನದಿ ತೀರದ ಪ್ರದೇಶಗಳು ಜಲಾವೃತಗೊಂಡಿದೆ.
ಬ್ರಹ್ಮಾವರ ಪರಿಸರದಲ್ಲಿ ನಿರಂತರ ಮಳೆ: ಪ್ರವಾಹ
ಬ್ರಹ್ಮಾವರ: ಪರಿಸರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ನದಿ ತೀರದ ಕೃಷಿ ಭೂಮಿ ಜಲಾವೃತಗೊಂಡಿದೆ. ಸೀತಾ ಮತ್ತು ಮಡಿಸಾಲು ಹೊಳೆ ಉಕ್ಕಿ ಹರಿದು ನಾಟಿ ಮಾಡಿದ ಗದ್ದೆಗಳಲ್ಲಿ ಪ್ರವಾಹದ ನೀರು ಕಾಣಿಸಿಕೊಂಡಿತ್ತಾದರೂ ಸಂಜೆ ವೇಳೆಗೆ ಸಂಪೂರ್ಣವಾಗಿ ಇಳಿಮುಖಗೊಂಡಿತು. ಕೋಟ ಪರಿಸರದಲ್ಲಿಯೂ ಬುಧವಾರ ಅನೇಕ ಗದ್ದೆಗಳು ಜಲಾವೃತಗೊಂಡಿದ್ದವು. ಆದರೆ ಗುರುವಾರ ಮಳೆಯ ಪ್ರಮಾಣ ಕಡಿಮೆ ಇದ್ದ ಕಾರಣ ನೆರೆಯ ಭೀತಿ ಇರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.