ಉಡುಪಿ: ಸಾಮಾಜಿಕ ಜಾಲತಾಣದಲ್ಲಿ ದೇಶದ ಯೋಧರನ್ನು ಅವಮಾನಿಸಿ, ಪಾಕಿಸ್ತಾನ ಸೇನೆಯ ಪರವಾಗಿ ಪೋಸ್ಟ್ ಹಾಕಿದ ಕಾರ್ಕಳದ ರಾಧಾಕೃಷ್ಣ ನಾಯಕ್ ಹಿರ್ಗಾನ ಪರವಾಗಿ ನಿಂತಿರುವ ಕಾಂಗ್ರೆಸ್ ನಾಯಕರು ಪೊಲೀಸರ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯಿಸುತ್ತಿದ್ದಾರೆ. ಪ್ರಾಮಾಣಿಕ ಅಧಿಕಾರಿಗೆ ತೊಂದರೆ ನೀಡಿದರೆ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ಮಂಗಳೂರು ಪ್ರಮುಖ ಪ್ರಕಾಶ್ ಕುಕ್ಕೆಹಳ್ಳಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ರಾಧಾಕೃಷ್ಣ ಸೇನೆ ವಿರುದ್ಧವಾಗಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಕ್ಕೆ ಪ್ರತಿಯಾಗಿ ಆ.21ರಂದು ಕಾರ್ಕಳದ ಹಿಂದೂ ಜಾಗರಣ ವೇದಿಕೆ ದೂರು ನೀಡಿತ್ತು. ಬಳಿಕ ಆರೋಪಿ ತಲೆ ಮರೆಸಿಕೊಂಡಿದ್ದ. ಈಚೆಗೆ ಕಾರ್ಕಳಕ್ಕೆ ಬಂದಿದ್ದ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಠಾಣೆಗೆ ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು.
ನಂತರ ಕಾರ್ಕಳದ ಕಾಂಗ್ರೆಸ್ ನಾಯಕರು ರಾಧಾಕೃಷ್ಣನನ್ನು ಆಸ್ಪತ್ರೆಗೆ ದಾಖಲಿಸಿ, ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎಂದು ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ದೇಶದ್ರೋಹದ ಆರೋಪ ಇರುವ ರಾಧಾಕೃಷ್ಣನ ಪರವಾಗಿ ನಿಂತಿದ್ದು, ಪೊಲೀಸರು ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ ಎಂದು ಪ್ರಕಾಶ್ ಕುಕ್ಕೆಹಳ್ಳಿ ಆರೋಪಿಸಿದರು.
ಸಿಎಎ ಗಲಭೆ, ಬೆಂಗಳೂರು ಗಲಭೆ ಸೇರಿದಂತೆ ಹಲವು ಕೃತ್ಯಗಳಲ್ಲಿ ದೇಶದ್ರೋಹಿಗಳ ಪರವಾಗಿ ಕಾಂಗ್ರೆಸ್ ನಿಂತಿದೆ. ರಾಧಾಕೃಷ್ಣ ಪ್ರಕರಣದಲ್ಲಿ ಪೊಲೀಸರ ನೈತಿಕ ಸ್ಥೈರ್ಯ ಕುಂದಿಸುವ ಕೆಲಸ ಮಾಡುತ್ತಿದೆ. ಒತ್ತಡಕ್ಕೆ ಕಾರ್ಕಳ ಠಾಣೆ ಸಬ್ ಇನ್ಸ್ಪೆಕ್ಟರ್ ವಿರುದ್ಧ ಕ್ರಮ ತೆಗೆದುಕೊಂಡರೆ ಹಿಂದೂ ಜಾಗರಣ ವೇದಿಕೆಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜೇಶ್ ಉಚ್ಚಿಲ, ಪ್ರವೀಣ್ ಯಕ್ಷಿಮಠ, ರಿಖೇಶ್ ಪಾಲನ್, ಮಹೇಶ್ ಬೈಲೂರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.