ಪಡುಬಿದ್ರಿ: ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ತಾಲ್ಲೂಕಿನ ಕೆಲವು ಮನೆಗಳಿಗೆ ಹಾನಿಯಾಗಿದೆ.
ಮಜೂರು ಗ್ರಾಮದ ಅಪ್ಪಿ ನಾಯಕ್ ಅವರ ಮನೆಗೆ ಮರ ಬಿದ್ದು ₹25 ಸಾವಿರ, ಕಳತ್ತೂರು ಗ್ರಾಮದ ಶ್ರೀನಿವಾಸ ಶೆಟ್ಟಿಗಾರ್ ಅವರ ಮನೆಗೆ ಹಾನಿ ಸಂಭವಿಸಿ ₹20 ಸಾವಿರ, ನಡ್ಸಾಲು ಗ್ರಾಮದ ಉನೈಝಾ ಬಾನು ಅವರ ಮನೆಗೆ ಮರ ಬಿದ್ದು ₹10 ಸಾವಿರ ನಷ್ಟ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಉಚ್ಚಿಲ ಪೇಟೆಯಲ್ಲಿ ಹೆದ್ದಾರಿ ಕಾಮಗಾರಿ ವೇಳೆ ನೆಲಸಮವಾಗಿದ್ದ ಬಾವಿ ಬಾಯ್ದೆರೆದು ಭಾರಿ ಗಾತ್ರದ ಹೊಂಡ ಕಾಣಿಸಿಕೊಂಡಿದ್ದು, ಭಾನುವಾರ ಸಂಜೆ ಹೆದ್ದಾರಿ ಇಲಾಖೆ ಗುತ್ತಿಗೆದಾರರು ಡಾಂಬಾರು ಮಿಶ್ರಿತ ಉಸುಕು ಹಾಕಿ ತಾತ್ಕಾಲಿಕವಾಗಿ ಮುಚ್ಚಿದ್ದಾರೆ.
ಕಡಲು ಪ್ರಕ್ಷುಬ್ಧ: ಕರಾವಳಿ ತೀರದಲ್ಲಿ ಭಾರಿ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಕಡಲು ಪ್ರಕ್ಷುಬ್ಧಗೊಂಡಿದೆ. ಹೆಜಮಾಡಿ, ಪಡುಬಿದ್ರಿ, ಎರ್ಮಾಳು, ಮೂಳೂರು, ಉಚ್ಚಿಲ, ಕಾಪುವಿನಲ್ಲಿ ಭಾರಿ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಸ್ಥಳೀಯ ಮೀನುಗಾರರು ಕಡಲ ತಡಿಗೆ ತೆರಳುತಿಲ್ಲ. ಆದರೆ ಇಲ್ಲಿಗೆ ಬರುವ ದೂರದ ಪ್ರವಾಸಿಗರು ಕಡಲಿನಲ್ಲಿ ಈಜಲು ಮುಂದಾಗುತ್ತಿದ್ದಾರೆ. ಸ್ಥಳೀಯರು ಕಡಲ ಪ್ರಕ್ಷುಬ್ಧತೆ, ಈ ಮೊದಲು ಸಂಭವಿಸಿರುವ ಘಟನೆಗಳನ್ನು ವಿವರಿಸಿ ವಾಪಾಸ್ ಕಳುಹಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.