ಕಾರ್ಕಳ: ತಾಲ್ಲೂಕಿನಾದ್ಯಂತ ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ.
ಮಾಳ ಗ್ರಾಮದ ಎಡಪಾಡಿ ಪ್ರದೇಶದಲ್ಲಿ ಗುಡ್ಡ ಕುಸಿಯುವ ಸಾಧ್ಯತೆ ಇರುವುದರಿಂದ ಘನ ವಾಹನಗಳ ಪ್ರವೇಶ ನಿರ್ಬಂಧಿಸಲಾಗಿದೆ. ಹಿರ್ಗಾನ ಗ್ರಾಮದ ಲಕ್ಷೀಪುರ ನೆಲ್ಲಿಕಟ್ಟೆ ಎಂಬಲ್ಲಿನ ನಿವಾಸಿ ಅಶೋಕ್ ಕುಮಾರ್ ಅವರ ಮನೆಗೆ ವಿದ್ಯುತ್ ಕಂಬ ಬಿದ್ದು ಹಾನಿಯಾಗಿದೆ.
ಬಂಡಿಮಠದ ನಿವಾಸಿ ಸುಜಾತ ಶೆಟ್ಟಿ ಅವರ ಮನೆಗೆ ಚಾವಣಿಗೆ ಹಾನಿಯಾಗಿದೆ. ಮಿಯಾರು ಗ್ರಾಮದ ಸೂರಲ್ ದರಿಕೆರೆ ನಿವಾಸಿ ದೇವಕಿ ಮೊಯ್ಲಿ ಅವರ ಮನೆಗೆ ಮರ ಬಿದ್ದು ನಷ್ಟವಾಗಿದೆ. ಮುಡಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣಪುರ ಮುಡಾರು ರಾಜ್ಯ ಹೆದ್ದಾರಿ ನಡುವಿನ ರಾಮೆರಾಗುತ್ತು ಸಮೀಪ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು, ನಿರೀನ ಮಟ್ಟ ಹೆಚ್ಚಾಗಿರುವುದರಿಂದ ರಸ್ತೆಯ ಎರಡೂ ಬದಿ ಮುಚ್ಚಲಾಗಿದೆ. ಕೆರ್ವಾಶೆಯಿಂದ ಬಜಗೋಳಿ ಕಡೆಗೆ ತೆರಳುವವರು ಹಡ್ಯಾಲು ಕ್ರಾಸ್ ಮೂಲಕ ತೆರಳುವಂತೆ ನಿರ್ದೇಶಿಸಲಾಗಿದೆ.
ಪಳ್ಳಿ ಉಡುಪಿ ಸಂಪರ್ಕಿಸುವ ಕಲ್ಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಾಡಿ ಬಂಡಸಾಲೆ ಎಂಬಲ್ಲಿ ಬೃಹತ್ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿವೆ. ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ. ಗ್ರಾಮ ಪಂಚಾಯಿತಿ, ಮೆಸ್ಕಾಂ, ಅರಣ್ಯ ಇಲಾಖೆ, ಸಾರ್ವಜನಿಕರು ಮರ ತೆರವುಗೊಳಿಸಿ ಸಂಚಾರಕ್ಕೆ ಅನು ಮಾಡಿಕೊಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.