ಕುಂದಾಪುರ: ತಾಲ್ಲೂಕಿಗೆ ಮೇನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಾಬ್ತು ₹29.5 ಕೋಟಿ ಬಂದಿದ್ದು, ಎರಡು ವರ್ಷದಲ್ಲಿ ₹373.5 ಕೋಟಿ ಬಂದಿದೆ ಎಂದು ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್. ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ತಿಳಿಸಿದರು.
ಇಲ್ಲಿನ ತಾಲ್ಲೂಕು ಪಂಚಾಯಿತಿ ಡಾ.ವಿ.ಎಸ್.ಆಚಾರ್ಯ ಸಭಾಭವನದಲ್ಲಿ ನಡೆದ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ಯಾರಂಟಿ ಸಮಿತಿ ರಾಜ್ಯಾಧ್ಯಕ್ಷ ಎಚ್.ಎಂ. ರೇವಣ್ಣ ಅವರ ಸೂಚನೆಯಂತೆ ರಾಜ್ಯದ ಎಲ್ಲಾ ಕಡೆ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಶಿಬಿರ ನಡೆಯಲಿದ್ದು, ತಾಲ್ಲೂಕು ಮಟ್ಟದಲ್ಲಿ ನಡೆಯಲಿರುವ ಈ ಶಿಬಿರದಲ್ಲಿ ಯೋಜನೆಯ ಸಾಧಕ–ಬಾಧಕ ಕುರಿತು ಚರ್ಚೆ, ಸಂವಾದ ನಡೆಯಲಿದೆ. ಶಿಬಿರದಲ್ಲಿ 5 ಇಲಾಖೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಸಮಿತಿ ರಾಜ್ಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಜುಲೈ 4ರಂದು ಜಿಲ್ಲೆಗೆ ಬರಲಿದ್ದು, ಒಂದು ತಾಲ್ಲೂಕಿನ ಪ್ರಗತಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಬಡಾಕೆರೆ ನಾಡ, ಕೊಲ್ಲೂರು ಬೈಂದೂರು ರೈಲು ನಿಲ್ದಾಣ ಮಾರ್ಗಕ್ಕೆ ಕೆಎಸ್ಆರ್ಟಿಸಿ ಬಸ್ಗಳನ್ನು ಓಡಿಸಲು ನ್ಯಾಯಾಲಯದ ತಡೆ ಆದೇಶ ಇದೆ. ಬಡಾಕೆರೆಗೆ ತಾತ್ಕಾಲಿಕ ಅನುಮತಿ ದೊರೆತಿದ್ದು ಸಮಯ ನಿಗದಿಯಾಗಿಲ್ಲ. ಹೊಸ ನೇಮಕಾತಿಯಲ್ಲಿ 60 ಚಾಲಕರು, ನಿರ್ವಾಹಕರನ್ನು ನೇಮಕಾತಿ ಮಾಡಲಾಗಿದ್ದು ತರಬೇತಿಗೆ ಕಳುಹಿಸಲಾಗಿದೆ ಎಂದು ಎಂದು ಕೆಎಸ್ಆರ್ಟಿಸಿ ಅಧಿಕಾರಿ ಬಿ.ಟಿ. ನಾಯಕ್ ಹೇಳಿದರು.
ವಿದ್ಯುತ್ ಕಂಬಗಳಲ್ಲಿ ಟಿ.ವಿ ಕೇಬಲ್ ಅಳವಡಿಕೆಗೆ ಅನುಮತಿ ನೀಡಲಾಗಿದ್ದು, ಕಂಬವೊಂದಕ್ಕೆ ₹100 ರಂತೆ ದರ ವಸೂಲಿ ಮಾಡಲಾಗುತ್ತದೆ ಎಂದು ಮೆಸ್ಕಾಂ ಎಇಇ ವಿಜಯ ಕುಮಾರ್ ಶೆಟ್ಟಿ ತಿಳಿಸಿದರು. ಗಂಗೊಳ್ಳಿಗೆ ಖಾಯಂ ಲೈನ್ಮೆನ್ ಬೇಕು, ದಾಕುಹಿತ್ಲು, ಲೈಟ್ಹೌಸ್ ರಸ್ತೆ, ಸುಗ್ಗಿಬೈಲಿಗೆ ಹೊಸ ಟಿ.ಸಿ ಬೇಕು ಎಂದು ಸದಸ್ಯ ಝಹೀರ್ ಅಹಮದ್ ಹೇಳಿದರು.
ಕೆಎಸ್ಆರ್ಟಿಸಿ ಬಸ್ ಸಂಚಾರ, ವಿದ್ಯುತ್ ಲೈನ್ ಸಮಸ್ಯೆ ಕುರಿತು ವಸುಂಧರಾ ಹೆಗ್ಡೆ, ಕೊರಗರ ಕುಟುಂಬಗಳಿಗೆ ಗೃಹಲಕ್ಷ್ಮೀ ಅನುದಾನ ಬಗ್ಗೆ ಗಣೇಶ್ ಕುಂಭಾಶಿ ಮಾತನಾಡಿದರು. ಸದಸ್ಯೆ ಸವಿತಾ ಪೂಜಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.