ADVERTISEMENT

16 ಮಠಾಧೀಶರಿಂದ ಅಖಂಡ ಪ್ರವಚನ

ರಾಜಾಂಗಣದಲ್ಲಿ ಭಕ್ತಿ ಸುಧೆ: ಮಾಧ್ವ ಪೀಠಾಧಿಪತಿಗಳ ಉಪಸ್ಥಿತಿ

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 19:50 IST
Last Updated 17 ಫೆಬ್ರುವರಿ 2019, 19:50 IST
ರಥಬೀದಿಯಲ್ಲಿ ಸುವರ್ಣ ರಥದಲ್ಲಿ ಮದ್ಬಾಗತ ಹಾಗೂ ಸರ್ವಮೂಲಗ್ರಂಥಗಳನ್ನಿಟ್ಟು ಉತ್ಸವ ನಡೆಸಲಾಯಿತು. ಅಷ್ಟಮಠಾಧೀಶರು ಉತ್ಸವದಲ್ಲಿ ಭಾಗವಹಿಸಿದ್ದರು.
ರಥಬೀದಿಯಲ್ಲಿ ಸುವರ್ಣ ರಥದಲ್ಲಿ ಮದ್ಬಾಗತ ಹಾಗೂ ಸರ್ವಮೂಲಗ್ರಂಥಗಳನ್ನಿಟ್ಟು ಉತ್ಸವ ನಡೆಸಲಾಯಿತು. ಅಷ್ಟಮಠಾಧೀಶರು ಉತ್ಸವದಲ್ಲಿ ಭಾಗವಹಿಸಿದ್ದರು.   

ಉಡುಪಿ: ಪರ್ಯಾಯ ಪಲಿಮಾರು ಮಠದ ಆಶ್ರಯದಲ್ಲಿ ಮಧ್ವರಾಜೋತ್ಸವದ ಪ್ರಯುಕ್ತ 16 ಮಾಧ್ವ ಪೀಠಾಧಿಪತಿಗಳುಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ 24 ಗಂಟೆಗಳ ಕಾಲ ಶ್ರೀಮದ್ ಭಾಗವತದ 12 ಸ್ಕಂದಗಳ ಅಖಂಡ ಪ್ರವಚನ ನಡೆಸಿಕೊಟ್ಟರು.

ಉತ್ತರಾದಿ ಮಠಾಧೀಶ ಸತ್ಯಾತ್ಮತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ಕೃಷ್ಣಾಪುರ ಮಠಾಧೀಶರಾದ ವಿದ್ಯಾಸಾಗರ ತೀರ್ಥರು, ಅದಮಾರು ಮಠಾಧೀಶ ವಿಶ್ವಪ್ರಿಯ ತೀರ್ಥರು, ಪೇಜಾವರ ಕಿರಿಯ ಮಠಾಧೀಶರಾದ ವಿಶ್ವಪ್ರಸನ್ನತೀರ್ಥರು, ತಂಬಿಹಳ್ಳಿ ಮಾಧವತೀರ್ಥ ಮಠಾಧೀಶರಾದ ವಿದ್ಯಾಸಿಂಧು ಮಾಧವತೀರ್ಥರು, ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನ ತೀರ್ಥರು, ಸೋದೆ ಮಠಾಧೀಶರಾದ ವಿಶ್ವವಲ್ಲಭತೀರ್ಥರು, ಕಾಣಿಯೂರು ಮಠಾಧೀಶರಾದ ವಿದ್ಯಾವಲ್ಲಭತೀರ್ಥರು, ಸೋಸಲೆ ಮಠಾಧೀಶರಾದ ವಿದ್ಯಾಶ್ರೀಷ ತೀರ್ಥರು, ಭಂಡಾರಿಕೇರಿ ಮಠಾಧೀಶರಾದ ವಿದ್ಯೇಶತೀರ್ಥ ಶ್ರೀಪಾದರು, ಕೂಡ್ಲಿ ಅಕ್ಷೋಭ್ಯತೀರ್ಥ ಮಠಾಧೀಶರಾದ ರಘುವಿಜಯ ತೀರ್ಥರು, ಭೀಮನಕಟ್ಟೆ ಮಠಾಧೀಶರಾದ ರಘುವರೇಂದ್ರ ತೀರ್ಥರು, ಸುವಿದ್ಯೇಂದ್ರ ತೀರ್ಥ ಶ್ರೀಪಾದರು, ಪರ್ಯಾಯ ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥರು, ಅದಮಾರು ಕಿರಿಯ ಮಠಾಧೀಶರಾದ ಈಶಪ್ರಿಯ ತೀರ್ಥರು ಭಾಗವತದ ಪ್ರವಚನ ನೀಡಿದರು.

ಶನಿವಾರ ಬೆಳಿಗ್ಗೆ 5ಕ್ಕೆ ಆರಂಭಾದ ಅಖಂಡ ಪುರಾಣ ಪ್ರವಚನ ಭಾನುವಾರ ಬೆಳಿಗ್ಗೆ 5ರವರೆಗೆ ನಿರಂತರವಾಗಿ ನಡೆಯಿತು. ವಾದಿರಾಜರ ಜಯಂತಿ ಅಂಗವಾಗಿ ಹಯವದನಾಂಕಿತ 108 ಕೃತಿಗಳ ಗಾನ ಪುಷ್ಪಾರ್ಪಣೆ ನಡೆಯಿತು. ಭಜನಾ ಮಂಡಳಿಗಳು ಭಾಗವಹಿಸಿ ವಾದಿರಾಜನ ಸ್ಮರಣೆ ಮಾಡಿದರು.

ADVERTISEMENT

ಭಾನುವಾರ ಮಧ್ಯಾಹ್ನ ರಥಬೀದಿಯಲ್ಲಿ ಸುವರ್ಣ ರಥದಲ್ಲಿ ಮಧ್ಭಾಗವತ ಹಾಗೂ ಸರ್ವಮೂಲಗ್ರಂಥಗಳನ್ನು ಇಟ್ಟು ಉತ್ಸವ ನಡೆಸಲಾಯಿತು. ರಜತ ರಥದಲ್ಲಿ ವಾದಿರಾಜರ ಉತ್ಸವ ನಡೆಯಿತು. ಮಧ್ವರಾಜ ಗುರುಗಳಿಗೆ ಗಾನ ನರ್ತನ ಸೇವೆ ನಡೆಯಿತು.

ಸಮಾಜದ ಜ್ವಲಂತ ಸಮಸ್ಯೆಗಳನ್ನು ನಿವಾರಿಸಲು, ವಿಶ್ವಕಲ್ಯಾಣಕ್ಕಾಗಿ, ಸನಾತನ ಧರ್ಮ, ಸಂಸ್ಕೃತಿ, ಸಾಹಿತ್ಯದ ರಕ್ಷಣೆಗಾಗಿ ಫೆ.5ರಿಂದ 17ರವರೆಗೂ ಮಧ್ವರಾಜೋತ್ಸವ ನಡೆಯಿತು. ನಾಡಿನ ಮೂಲೆಮೂಲೆಗಳಿಂದ ಆಗಮಿಸಿದ್ದ ಪ್ರಸಿದ್ಧ ವಿದ್ವಾಂಸರು 24 ತಾಸು ಗ್ರಂಥಗಳ ಪಾರಾಯಣ ಮಾಡಿದರು. ಮದ್ವೇದವ್ಯಾಸ ವಿರಚಿತ, ಮದ್ಭಾಗವಗ್ರಂಥ, ಮನ್ವಧ್ವಾಚಾರ್ಯ ವಿರಚಿತ ಸರ್ವಮೂಲ ಗ್ರಂಥಗಳ ಹಾಗೂ ಮಧ್ವಾಧಿರಾಜ ಗುರುಸಾರ್ವಭೌಮ ವಿರಚಿತವಾದ ಶ್ರೀಯುಕ್ತಿಮಲ್ಲಿಕಾಧಿ ಗ್ರಂಥಗಳ ಸಾರವನ್ನು ವಿದ್ವಾಂಸರು ಭಕ್ತರಿಗೆ ಉಣಬಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.