ಉಡುಪಿ: ಮತ್ಸ್ಯಸಿರಿಯಲ್ಲಿ ತಯಾರಾಗುವ ಮೀನಿನ ಖಾದ್ಯಗಳನ್ನು ರೈಲಿನಲ್ಲಿ ಮಾರಾಟ ಮಾಡುವ ಕುರಿತು ರೈಲ್ವೆ ಇಲಾಖೆ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕಲ್ಯಾಣಪುರದ ಮೂಡುಕುದ್ರುವಿನಲ್ಲಿ ಶುಕ್ರವಾರ ‘ಕಡಲು’ ಆ್ಯಪ್ ಬಿಡುಗಡೆ ಹಾಗೂ ಪಂಜರ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರು, ಈಚೆಗೆ ಕೆಎಫ್ಡಿಸಿ ಅಧಿಕಾರಿಗಳು ದೆಹಲಿಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳ ಜತೆ ಚರ್ಚಿಸಿ ಒಪ್ಪಂದ ಮಾಡಿಕೊಂಡಿದ್ದು, ಕೆಎಫ್ಡಿಸಿಯಲ್ಲಿ ನೂರಾರು ಕೋಟಿ ವ್ಯವಹಾರ ನಡೆಯುವ ವಿಶ್ವಾಸವಿದೆ ಎಂದರು.
ಸಿಂಗಪುರ ವಾರ್ಷಿಕವಾಗಿ 40 ರಿಂದ 50 ದಶಲಕ್ಷ ಡಾಲರ್ ಮೌಲ್ಯದ ಅಲಂಕಾರಿಕ ಮೀನುಗಳನ್ನು ರಫ್ತು ಮಾಡುತ್ತಿದೆ. ಆದರೆ, ಬಹುದೊಡ್ಡ ಮತ್ಸ್ಯಸಂಪತ್ತು ಹೊಂದಿರುವ ಭಾರತ ಸಿಂಗಪುರದ ಶೇ 1ರಷ್ಟು ಕೂಡ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಬೃಹತ್ ಅಕ್ವೇರಿಯಂ ಘಟಕ ಸ್ಥಾಪಿಸುವ ಚಿಂತನೆ ನಡೆದಿದೆ. ಮಂಗಳೂರಿನ ಮೀನುಗಾರಿಕಾ ಕಾಲೇಜನ್ನು ವಿಶ್ವವಿದ್ಯಾಲಯವನ್ನಾಗಿ ಪರಿವರ್ತಿಸುವುದು ಹಾಗೂ ರಾಜ್ಯದ ಐದು ಕಡೆಗಳಲ್ಲಿ ಮೀನುಗಾರಿಕಾ ಕಾಲೇಜುಗಳನ್ನು ಆರಂಭಿಸುವ ಪ್ರಸ್ತಾವ ಸರ್ಕಾರದ ಮುಂದಿದೆ ಎಂದು ಸಚಿವ ಕೋಟ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.