ADVERTISEMENT

ಒಂಟಿ ವೃದ್ಧೆ ಕೊಲೆ: ಚಿನ್ನಾಭರಣ ಕಳವು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2020, 15:27 IST
Last Updated 13 ಫೆಬ್ರುವರಿ 2020, 15:27 IST

ಉಡುಪಿ: ನಿಟ್ಟೂರಿನ ವಿಷ್ಣುಮೂರ್ತಿ ನಗರದಲ್ಲಿ ಒಂಟಿ ವೃದ್ಧೆಯನ್ನು ಬುಧವಾರ ರಾತ್ರಿ ಕೊಲೆ ಮಾಡಲಾಗಿದೆ.

ಮಾಲತಿ ಕಾಮತ್ (68) ಕೊಲೆಯಾದವರು. ನಗರದಲ್ಲಿ ಒಂಟಿಯಾಗಿ ವಾಸವಾಗಿದ್ದ ಮಾಲತಿ ಕಾಮತ್ ಮನೆಗೆ ನುಗ್ಗಿದ ದುಷ್ಕರ್ಮಿಗಳು ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಬಳಿಕ ಮೈಮೇಲಿದ್ದ ಚಿನ್ನಾಭರಣ ಹಾಗೂ ಕಪಾಟಿನಲ್ಲಿದ್ದ ಒಡವೆಗಳನ್ನು ದೋಚಿದ್ದಾರೆ. ₹ 60000 ನಗದು ಕೂಡ ಕಳವಾಗಿದೆ.

ಮೃತರ ಪುತ್ರಿ ಕಾಸರಗೋಡಿನ ದಿವ್ಯಾ ನಾಯಕ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿದ್ದಾರೆ. ಒಂಟಿ ವೃದ್ಧೆಯ ಕೊಲೆ ನಾಗರಿಕಲ್ಲಿ ಆತಂಕ ಮೂಡಿಸಿದೆ.

ADVERTISEMENT

ವ್ಯಕ್ತಿ ಆತ್ಮಹತ್ಯೆ
ಉಡುಪಿ:
ಮಕ್ಕಳ ಅನಾರೋಗ್ಯ ಹಾಗೂ ಹಣಕಾಸಿನ ಸಮಸ್ಯೆಯಿಂದ ನೊಂದು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅಂಬಲಪಾಡಿಯ ಕಂಬಳಕಟ್ಟದ ಎಂ.ತಾರಾನಾಥ ಮೃತರು. ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಫ್ಯಾನ್‌ಗೆ ನೇಣುಹಾಕಿಕೊಂಡು ಮೃತಪಟ್ಟಿದ್ದಾರೆ ಎಂದು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ಸೇವನೆ: ಪ್ರಕರಣ
ಉಡುಪಿ:
ಮಣಿಪಾಲ ಠಾಣಾ ವ್ಯಾಪ್ತಿಯ ಹಲವೆಡೆ ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದವರನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ಮಣಿಪಾಲದ ಅದಿತಿಪರ್ವ ಆಪಾರ್ಟ್‌ಮೆಂಟ್‌ ಬಳಿ ಸಕ್ಷಮ್‌ ತುಲ್ಸಾನಿ, ಟೈಗರ್ ಸರ್ಕಲ್ ಬಳಿ ಸೋನಾಲಿ ಪರಬ್‌, ಆದಿಲ್‌ ಸಲೀಂ, ಮಹಮ್ಮದ್‌ ರಿದಾನ್‌ ರಶೀದ್‌‌, ಸಾಹಿಲ್‌ ಶರ್ಮ ಎಂಬುವರನ್ನು ವಶಕ್ಕೆ ಪಡೆದು ಕೆಎಂಸಿ ಆಸ್ಪತ್ರೆಯ ಫೊರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೊಳಪಡಿಸಲಾಯಿತು. ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.