ಉಡುಪಿ: ಅಖಂಡ ಶ್ರೀನಿವಾಸ್ ಮನೆಯ ಮೇಲಿನ ದಾಳಿ ಪ್ರಕರಣದಲ್ಲಿ ಸಂಪತ್ ರಾಜ್ ಕೈವಾಡವಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನೈತಿಕತೆ ಇದ್ದರೆ ಆರೋಪಿ ಸಂಪತ್ ರಾಜ್ಗೆ ಶರಣಾಗುವಂತೆ ಸೂಚನೆ ನೀಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸವಾಲು ಹಾಕಿದರು.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಸಂಪತ್ ರಾಜ್ ನಾಪತ್ತೆಯ ಹಿಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಕೈವಾಡವಿದೆ. ಇಬ್ಬರೂ ಆರೋಪಿಯ ಪರವಾಗಿ ನಿಂತಿದ್ದಾರೆ. ಸರ್ಕಾರ ಸಂಪತ್ ರಾಜ್ನನ್ನು ಬಂಧನ ಮಾಡಲೇಬೇಕು ಎಂದು ನಳಿನ್ ಒತ್ತಾಯಿಸಿದರು.
ರಾಜಕಾರಣ ಮಾಡುವುದಕ್ಕಾಗಿ ಅಖಂಡ ಶ್ರೀನಿವಾಸ್ ಪರ ಬೆಂಬಲಕ್ಕೆ ನಿಂತಿಲ್ಲ. ಅವರನ್ನು ಪಕ್ಷಕ್ಕೂ ಸೇರಿಸಿಕೊಳ್ಳುವುದಿಲ್ಲ. ಆದರೆ, ಸಜ್ಜನ ಹಾಗೂ ದಲಿತ ಶಾಸಕನ ಮನೆಯ ಮೇಲೆ ದಾಳಿ ನಡೆದಾಗ ಆರೋಪಿಯ ರಕ್ಷಣೆಗೆ ನಿಲ್ಲುವುದು ಸರಿಯಲ್ಲ. ಅಖಂಡ ಶ್ರೀನಿವಾಸ್ ಅವರಿಗೆ ನ್ಯಾಯ ಕೊಡಿಸುವ ಕೆಲಸವನ್ನು ಬಿಜೆಪಿ ಮಾಡಲಿದೆ ಎಂದು ಕಟೀಲ್ ಹೇಳಿದರು.
ಶಿರಾದಲ್ಲಿ ಸಿದ್ದರಾಮಯ್ಯ, ಆರ್.ಆರ್ ನಗರದಲ್ಲಿ ಡಿಕೆಶಿ ಉಪ ಚುನಾವಣೆ ನೇತೃತ್ವ ವಹಿಸಿಕೊಂಡಿದ್ದರು. ಮುಂದಿನ ನಾಯಕತ್ವದ ದೃಷ್ಟಿಯಿಂದ ಶಿರಾದಲ್ಲಿ ಸೋಲಾಗಬೇಕು ಎಂದು ಡಿಕೆಶಿ, ಆರ್.ಆರ್ ನಗರದಲ್ಲಿ ಸೋಲಾಗಬೇಕು ಎಂದು ಸಿದ್ದರಾಮಯ್ಯ ಬಯಸಿದ್ದರು. ಇಬ್ಬರ ಆಸೆಯಂತೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ ಎಂದು ನಳಿನ್ ವ್ಯಂಗ್ಯವಾಡಿದರು.
ಬಿಜೆಪಿ ಸರ್ಕಾರ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ. ಪಕ್ಷದಲ್ಲಿ ನಿಯಮಗಳನ್ನು ಮೀರಿ ಯಾರೂ ವರ್ತಿಸಬಾರದು. ಯತ್ನಾಳ್ ಹೇಳಿಕೆ ವಿರುದ್ಧ ಕ್ರಮ ತೆಗೆದುಕೊಳ್ಳುವ ತೀರ್ಮಾನ ಪಕ್ಷಕ್ಕೆ ಬಿಟ್ಟಿದ್ದು, ಅದನ್ನು ತೆಗೆದುಕೊಂಡಿದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.