ADVERTISEMENT

ಅಕಾಡೆಮಿಗೆ ಹೆಚ್ಚಿನ ಅನುದಾನಕ್ಕೆ ಮನವಿ

ತರಬೇತಿ ಶಿಬಿರದಲ್ಲಿ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2020, 10:56 IST
Last Updated 25 ಫೆಬ್ರುವರಿ 2020, 10:56 IST
ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಭವನದಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಜಾನಪದ ಪ್ರಕಾರಗಳ ತರಬೇತಿ ಶಿಬಿರವನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಡೋಲು ಬಾರಿಸಿ ಉದ್ಘಾಟಿಸಿದರು. 
ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಭವನದಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಜಾನಪದ ಪ್ರಕಾರಗಳ ತರಬೇತಿ ಶಿಬಿರವನ್ನು ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಡೋಲು ಬಾರಿಸಿ ಉದ್ಘಾಟಿಸಿದರು.    

ಉಡುಪಿ: ಜಾನಪದ ಕಲೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಜಾನಪದ ಅಕಾಡೆಮಿಗೆ ಹೆಚ್ಚಿನ ಅನುದಾನ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರಾಜ್ಯ ಜಾನಪದ ಅಕಾಡೆಮಿ ಅಧ್ಯಕ್ಷೆ ಮಂಜಮ್ಮ ಜೋಗತಿ ಹೇಳಿದರು.

ಸೋಮವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಭಾಭವನದಲ್ಲಿ ಜಾನಪದ ಅಕಾಡೆಮಿ, ಸಂಸ್ಕೃತಿ ವಿಶ್ವ ಪ್ರತಿಷ್ಠಾನ, ಉಡುಪಿ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದ ಸಹಭಾಗಿತ್ವದಲ್ಲಿ ನಡೆದ ಗಿರಿಜನ ಉಪಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ಶಿಬಿರಾರ್ಥಿಗಳಿಗೆ ಜಾನಪದ ಪ್ರಕಾರಗಳ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದೆ ಕಲೆಗಳನ್ನು ಕಲಿಯಲು ಗುರುಗಳನ್ನು ಹುಡುಕಿಕೊಂಡು ಹೋಗಿ, ಗುರುದಕ್ಷಿಣೆ ಕೊಟ್ಟು ಕಲಿಯಬೇಕಿತ್ತು. ಈಗ ಸರ್ಕಾರವೇ ಗುರುಗಳನ್ನು ನೇಮಿಸಿ, ಗುರುದಕ್ಷಿಣೆಯನ್ನೂ ನೀಡಿ, ಕಲಿಯುವ ಶಿಷ್ಯರಿಗೆ ಶಿಷ್ಯ ವೇತನವನ್ನೂ ನೀಡುತ್ತಿದೆ ಎಂದರು.

ADVERTISEMENT

ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ತಲುಪಿಸುವ ಜವಾಬ್ದಾರಿ ಯುವಜನಾಂಗದ ಮೇಲಿದೆ. ರಾಜ್ಯದಲ್ಲಿ ಜಾನಪದ ಕಲೆಗಳನ್ನು ಬೆಳೆಸಲು, ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದ್ದು, ಇದಕ್ಕಾಗಿ ಅಕಾಡೆಮಿಗೆ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರವನ್ನು ಕೋರಲಾಗುವುದು ಎಂದರು.

ಬೈಂದೂರಿನ ಮಹಾತ್ಮ ಜ್ಯೋತಿ ಬಾ ಫುಲೆ ಕಲಾ ವೇದಿಕೆ ಅಧ್ಯಕ್ಷ ವೈ.ಲಕ್ಷ್ಮಣ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿರಿಯರು ಉಳಿಸಿ ಬೆಳೆಸಿರುವ ಜಾನಪದ ಪ್ರಕಾರಗಳು ನಶಿಸಿ ಹೋಗುತ್ತಿದ್ದು, ಉಳಿಸಿಕೊಳ್ಳುವ ಅಗತ್ಯವಿದೆ. ಜಾನಪದ ಕಲಾ ಪ್ರತಿಭೆಯನ್ನು ಗುರುತಿಸಿ, ವ್ಯವಸ್ಥಿತ ತರಬೇತಿ ನೀಡಿ, ಮುಂದಿನ ಜನಾಂಗಕ್ಕೆ ಕಲೆಗಳನ್ನು ತಲುಪಿಸಬೇಕು ಎಂದರು.

ಪ್ರಾದೇಶಿಕ ರಂಗ ಕಲೆಗಳ ಅಧ್ಯಯನ ಕೇಂದ್ರದ ಸಂಯೋಜಕ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಕಾಡಿನಲ್ಲಿರುವ ಗಿರಿಜನ ನಾಡಿನ ಆಸ್ತಿ. ಕಾಡುಗಳು ಉಳಿದಿರುವುದೇ ಗಿರಿಜನರಿಂದ. ಜಾನಪದ ಕಲಾ ಪ್ರಕಾರಗಳನ್ನೂ ಉಳಿಸಿಕೊಂಡು ಬಂದಿರುವ ಗಿರಿಜನರು ನಾಡಿನ ಸಂಪತ್ತು ಎಂದರು.

ಜನಪದ ಕಲೆಗಳನ್ನು ಆಸಕ್ತಿಯಿಂದ, ಪ್ರೀತಿಯಿಂದ ನೋಡಿಕೊಳ್ಳದಿದ್ದರೆ ನಶಿಸಿ ಹೋಗುತ್ತವೆ. ಜಾನಪದ ರಂಗ ಕಲೆಗಳ ಅಧ್ಯಯನ ಕೇಂದ್ರವು 25 ವರ್ಷಗಳಿಂದ ಜಾನಪದ ಕಲೆಗಳ ದಾಖಲೀಕರಣ ಮಾಡುತ್ತಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದಅಧ್ಯಕ್ಷ ಪ್ರೊ. ಶಂಕರ್, ಗೌರವಾಧ್ಯಕ್ಷ ಯು.ವಿಶ್ವನಾಥ ಶೆಣೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಉಪಸ್ಥಿತರಿದ್ದರು.

ಕರ್ನಾಟಕ ಜಾನಪದ ಅಕಾಡೆಮಿ ರಿಜಿಸ್ಟ್ರಾರ್ ಎನ್.ನಮ್ರತಾ ಸ್ವಾಗತಿಸಿದರು. ಸಂಚಾಲಕರಾದ ಎಚ್‌.ಪಿ.ರವಿರಾಜ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.