ಉಡುಪಿ: ಉಡುಪಿಯಲ್ಲಿ ಫೆ.11 ಹಾಗೂ 12ರಂದು ನಡೆಯುತ್ತಿರುವ ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಗೋಷ್ಠಿಗಳ ಉದ್ಘಾಟನೆ ಹಾಗೂ ದಿಕ್ಸೂಚಿ ಭಾಷಣ ಮಾಡಲು ಲೇಖಕ ರೋಹಿತ್ ಚಕ್ರತೀರ್ಥ ಅವರನ್ನು ಆಹ್ವಾನಿಸಿರುವುದಕ್ಕೆ ಸಾರ್ವಜನಿಕ ವಲಯದಿಂದ ವಿರೋಧ ವ್ಯಕ್ತವಾಗಿದೆ.
‘ಕರಾವಳಿಯ ಯಕ್ಷಗಾನ ವಿಶ್ವ ಪ್ರಸಿದ್ಧ ಕಲೆಯಾಗಿ ಬೆಳೆದಿದೆ. ಕಳೆದ ಆರು ಶತಮಾನಗಳಿಂದ ಯಕ್ಷಗಾನ ಬೆಳೆದು ಬಂದ ರೀತಿ ಅಚ್ಚರಿ ಹುಟ್ಟಿಸುತ್ತದೆ. ಆ ಕಲೆಯನ್ನು ಅತ್ಯದ್ಭುತವಾಗಿ ಸಂಘಟಿಸುವ ಹಲವು ಮಹನೀಯರು ಇದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ಬರೆದು ಪ್ರಸಿದ್ಧರಾದವರಿದ್ದಾರೆ.
ಯಕ್ಷಗಾನ ಕಲಾವಿದರು ಪುರಾಣ, ಇತಿಹಾಸ ಮತ್ತು ವರ್ತಮಾನಗಳನ್ನು ಬೆಸೆದು ರಂಗಭೂಮಿಯ ಮೇಲೆ ವಿಸ್ಮಯಗಳನ್ನೇ ಸೃಷ್ಟಿಸಿದ್ದಾರೆ. ಯಕ್ಷಗಾನ ವಿಮರ್ಶೆಯೂ ಸರ್ವಾಂಗೀಣವಾಗಿ ಬೆಳೆದಿದೆ. ಈ ಕಲೆಯಲ್ಲಿನ ಭಾಗವತರು, ಚಂಡೆ ವಾದಕರು, ಮದ್ದಲೆ ವಾದಕರು ವಿಶಿಷ್ಟ ಶೈಲಿಗಳನ್ನೇ ನಿರ್ಮಿಸಿ ಕರ್ನಾಟಕ ಸಂಸ್ಕೃತಿಯ ಘನತೆಯನ್ನು ವಿಸ್ತರಿಸಿದ್ದಾರೆ.
ಇಂಥ ಮಹಾನ್ ಕಲೆಯೊಂದರ ರಾಜ್ಯ ಸಮ್ಮೇಳನ ನಡೆಯುವುದು ಅತ್ಯಂತ ಅವಶ್ಯಕವಾಗಿತ್ತು. ಅದರಂತೆ ಇದೀಗ ಉಡುಪಿಯಲ್ಲಿ ನಡೆಯುತ್ತಿದೆ. ಹಿರಿಯ ಕಲಾವಿದರಾದ ಪ್ರಭಾಕರ ಜೋಷಿ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಇದು ಯಕ್ಷಗಾನ ಪ್ರಿಯರಿಗೆ ಸಂತೋಷ ಕೊಡುವ ವಿಷಯವೇ ಹೌದು.
ಆದರೆ, ಸಮ್ಮೇಳನದ ದಿಕ್ಷೂಚಿ ಭಾಷಣಕ್ಕೆ ಸಂಘಟಕ, ಕಲಾವಿದ, ಪ್ರಸಂಗ ಕರ್ತ ಅಥವಾ ವಿಮರ್ಶಕನೂ ಅಲ್ಲದ ರೋಹಿತ್ ಚಕ್ರತೀರ್ಥರನ್ನು ಆರಿಸಲಾಗಿದೆ. ಯಕ್ಷಗಾನ ಲೋಕದಲ್ಲಿ ಚಕ್ರತೀರ್ಥರಿಗಿಂತ ಬಹಳ ಸಾಧನೆ ಮಾಡಿರುವ ಡಾ.ವಿವೇಕ ರೈ, ಡಾ.ಚಿನ್ನಪ್ಪ ಗೌಡ, ಡಾ.ಚಂದ್ರಶೇಖರ ದಾಮ್ಲೆ, ಡಾ.ರಾಘವ ನಂಬಿಯಾರ್, ಡಾ.ಪಾದೆಕಲ್ಲು ವಿಷ್ಣು ಭಟ್, ಡಾ.ವಸಂತ ಭಾರದ್ವಾಜ್. ಡಾ.ನಾಗವೇಣಿ ಮಂಚಿ, ರಾಧಾಕೃಷ್ಣ ಕಲ್ಚಾರ್, ಕಲಾವಿದ ಜಬ್ಬಾರ್ ಸಮೋ, ಡಾ.ಪೃಥ್ವಿರಾಜ ಕವತ್ತಾರ್, ಡಾ.ಆನಂದ ರಾಮ ಉಪಾಧ್ಯ, ಡಾ.ಜಿ.ಎಸ್.ಭಟ್, ಗೋಪಾಲಕೃಷ್ಣ ಭಾಗವತ, ಕೆರೆಮನೆ ಶಿವಾನಂದ ಹೆಗಡೆ, ವಿದ್ವಾನ್ ರಂಗಾ ಭಟ್ಟ ಮೊದಲಾದ ಅಸಂಖ್ಯ ಮಹನೀಯರಿದ್ದಾರೆ.
ಈ ಮಹನೀಯರು ಯಕ್ಷಗಾನದ ಯಾವುದೇ ಕ್ಷೇತ್ರದ ಮೇಲೆ ಅಧಿಕೃತವಾಗಿ ಮಾತಾಡಬಲ್ಲ ಧೀಮಂತರಾಗಿದ್ದಾರೆ. ಇಂಥವರನ್ನು ಬದಿಗೊತ್ತಿ, ದಿಕ್ಸೂಚಿ ಭಾಷಣಕ್ಕೆ ರೋಹಿತ್ ಚಕ್ರತೀರ್ಥರಂಥವರನ್ನು ಕರೆದಿರುವುದು ಆ ಕಲೆಗೆ ಮಾಡಿದ ಬಹುದೊಡ್ಡ ಅವಮಾನ ಎಂದು ನಾವು ಭಾವಿಸುತ್ತೇವೆ. ಸಂಘಟಕರು ಈ ಕಡೆ ಗಮನ ಹರಿಸಬೇಕು’ ಎಂದು ರಂಗ ಕರ್ಮಿ ಉದ್ಯಾವರ ನಾಗೇಶ ಕುಮಾರ್, ಕುಂಬ್ಳೆ ಸದಾಶಿವ ಮಾಸ್ತರ್, ಶ್ರೀನಿವಾಸ ಕಾರ್ಕಳ ಹಾಗೂ
ಲೇಖಕ ಪುರುಷೋತ್ತಮ ಬಿಳಿಮಲೆ ಒತ್ತಾಯಿಸಿದ್ದಾರೆ.
ಚಕ್ರತೀರ್ಥ ಆಹ್ವಾನ ತಪ್ಪಲ್ಲ: ಸುನಿಲ್ ಕುಮಾರ್
ಲೇಖಕ ಹಾಗೂ ಸಾಹಿತಿ ರೋಹಿತ್ ಚಕ್ರತೀರ್ಥ ಅವರನ್ನು ಯಕ್ಷಗಾನ ಸಮ್ಮೇಳನಕ್ಕೆ ಆಹ್ವಾನಿಸಿರುವುದು ತಪ್ಪಲ್ಲ. ಚಕ್ರತೀರ್ಥ ಬರಹಗಳ ಮೂಲಕ ರಾಷ್ಟ್ರೀಯ ವಿಚಾರಧಾರೆಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಕೂಡ ರಾಷ್ಟ್ರೀಯ ವಿಚಾರಧಾರೆಗಳಿಗೆ ಬದ್ಧವಾಗಿ ಕೆಲಸ ಮಾಡುತ್ತಿದೆ. ಚಕ್ರತೀರ್ಥ ಮಾತ್ರವಲ್ಲ ರಾಷ್ಟ್ರೀಯ ವಿಚಾರಧಾರೆ ಹೊಂದಿರುವ ಎಲ್ಲ ಬರಹಗಾರರನ್ನು ಸಮ್ಮೇಳನಕ್ಕೆ ಆಹ್ವಾನಿಸುತ್ತೇವೆ ಎಂದು ಸಚಿವ ಸುನಿಲ್ ಕುಮಾರ್ ಸಮರ್ಥನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.