ADVERTISEMENT

ಸಾವಿನಲ್ಲೂ ಸಾರ್ಥಕತೆ ಮೆರೆದ ಶ್ರೀನಿವಾಸ್‌: 6 ಮಂದಿಗೆ ಅಂಗಾಗ ದಾನ

ಬ್ರಹ್ಮಾವರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಿದುಳು ಮೃತ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2022, 14:12 IST
Last Updated 5 ಏಪ್ರಿಲ್ 2022, 14:12 IST
ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಶ್ರೀನಿವಾಸ್‌ ಎಂಬುವರ ಅಂಗಾಂಗಳನ್ನು ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು.
ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯಗೊಂಡು ಸಾವನ್ನಪ್ಪಿದ ಶ್ರೀನಿವಾಸ್‌ ಎಂಬುವರ ಅಂಗಾಂಗಳನ್ನು ಆಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕೊಂಡೊಯ್ಯಲಾಯಿತು.   

ಉಡುಪಿ: ರಸ್ತೆ ಅಪಘಾತದಲ್ಲಿ ತಲೆಗೆ ಗಂಭೀರ ಪೆಟ್ಟು ಬಿದ್ದು ಮಿದುಳು ನಿಷ್ಕ್ರಿಯಗೊಂಡಿದ್ದ ಯುವಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮರಣಾನಂತರ ಯುವಕನ ಅಂಗಾಂಗಳನ್ನು 6 ರೋಗಿಗಳಿಗೆ ಅಳವಡಿಸಲಾಗಿದ್ದು, ಹೊಸ ಜೀವನಕ್ಕೆ ನಾಂದಿ ಹಾಡಿದಂತಾಗಿದೆ.

ಬ್ರಹ್ಮಾವರ ತಾಲ್ಲೂಕಿನ ಉಪ್ಪಿನಕೋಟೆ ಬಳಿ ಏ.2ರಂದು ಸಂಜೆ 4.45ಕ್ಕೆ 19 ವರ್ಷದ ಶ್ರೀನಿವಾಸ್‌ಗೆ ಅಪಘಾತ ಸಂಭವಿಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕಸ್ತೂರಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವೈದ್ಯರು ನೀಡಿದ ಚಿಕಿತ್ಸೆಗೆ ಶ್ರೀನಿವಾಸ್ ಸ್ಪಂದಿಸಲಿಲ್ಲ. ಚೇತರಿಸಿಕೊಳ್ಳುವ ಲಕ್ಷಣಗಳು ಕಾಣಲಿಲ್ಲ. 6 ಗಂಟೆಗಳ ಅಂತರದಲ್ಲಿ ಎರಡು ಬಾರಿ ಪರೀಕ್ಷೆ ನಡೆಸಿದ ಪರಿಣತ ವೈದ್ಯರ ತಂಡ ಶ್ರೀನಿವಾಸ್‌ ಅವರ ಮಿದುಳು ನಿಷ್ಟ್ರಿಯಗೊಂಡಿರುವುದಾಗಿ ಘೋಷಿಸಿದರು.

ADVERTISEMENT

ಪೋಷಕರಾದ ರಾಜು ನಾಯರಿ ಪುತ್ರ ಶ್ರೀನಿವಾಸ್ ಅವರ ಕಾರ್ಯ ಸಾಧ್ಯ ಅಂಗಗಳನ್ನು ದಾನ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಅದರಂತೆ ಎರಡು ಮೂತ್ರಪಿಂಡ, ಯಕೃತ್ತು, ಚರ್ಮ ಮತ್ತು ಎರಡು ಕಾರ್ನಿಯಾಗಳು, ಕಣ್ಣುಗುಡ್ಡೆಗಳನ್ನು ತೆಗೆದು 6 ಜನರ ಜೀವ ಉಳಿಸಲು ಬಳಸಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.

ಜೀವನ ಸಾರ್ಥಕತೆ ಪ್ರೋಟೊಕಾಲ್‌ಗಳು ಹಾಗೂ ನಿರ್ಧಾರಗಳ ಪ್ರಕಾರ ಎರಡು ಕಾರ್ನಿಯಾ ಮತ್ತು ಎರಡು ಮೂತ್ರಪಿಂಡ ಹಾಗೂ ಚರ್ಮವನ್ನು ಕಸ್ತೂರಬಾ ಆಸ್ಪತ್ರೆಯ ನೋಂದಾಯಿತ ರೋಗಿಗಳಿಗೆ ಬಳಸಲಾಯಿತು, ಯಕೃತ್ತನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು.

‘ಅಂಗದಾನ ಪುಣ್ಯದ ಕೆಲಸವಾಗಿದ್ದು, ಮಗ ಶ್ರೀನಿವಾಸ್‌ ಸಾವಿನಲ್ಲೂ ಅಂಗಾಂಗ ದಾನದಂತಹ ಪುಣ್ಯ ಕಾರ್ಯ ಮಾಡಿ ಸಾರ್ಥಕತೆ ಮೆರೆದಿದ್ದಾನೆ‘ ಎಂದರು.

ಜೀವ ಉಳಿಸುವ ನಿಟ್ಟಿನಲ್ಲಿ ಅಂಗಾಂಗ ದಾನ ಶ್ರೇಷ್ಠ ಕಾರ್ಯವಾಗಿದ್ದು, ಅತ್ಯಂತ ಮಹತ್ವದ್ದು. ಸಾರ್ವಜನಿಕರು ಇಂತಹ ಉತ್ತಮ ಕಾರ್ಯಗಳನ್ನು ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದ ಕೆಎಂಸಿ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್‌ ಶೆಟ್ಟಿ ದಾನಿಗಳಾದ ಶ್ರೀನಿವಾಸ್ಕುಟುಂಬಕ್ಕೆ ಕ್ರತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.