ಪ್ರಜಾವಾಣಿ ವಾರ್ತೆ
ಪಡುಬಿದ್ರಿ: ಎಲ್ಲೂರಿನಿಂದ ಕಾಸರಗೋಡಿಗೆ 400 ಕೆ.ವಿ ವಿದ್ಯುತ್ ಸರಬರಾಜಿಗೆ ಟವರ್ ನಿರ್ಮಾಣಕ್ಕೆ ಖಾಸಗಿ ಜಾಗದಲ್ಲಿ ಸಿದ್ಧತೆ ಆರಂಭಿಸಿದ್ದು, ಇದಕ್ಕೆ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಮಂಗಳವಾರ ಇನ್ನಾ ಗ್ರಾಮ ಪಂಚಾಯಿತಿಯ ಪಲಿಮಾರಿನಲ್ಲಿ ನಡೆದಿದೆ.
ಇಲ್ಲಿನ ವಿದ್ಯುತ್ ಕೇರಳಕ್ಕೆ ಸರಬರಾಜು ಮಾಡಲು ಟವರ್ ನಿರ್ಮಾಣಕ್ಕೆ ಗುತ್ತಿಗೆ ಪಡೆದಿರುವ ಸ್ಟರ್ಲೈಟ್ ಸಂಸ್ಥೆಯ ಕಾಮಗಾರಿಗೆ ಸ್ಥಳೀಯ ಜಮೀನುದಾರರ ವಿರೋಧ ವ್ಯಕ್ತವಾಗಿತ್ತು. ಹೋರಾಟದ ತೀವ್ರತೆ ಹೆಚ್ಚಾಗುತ್ತಿದ್ದಂತೆಯೇ ಕೆಲವು ತಿಂಗಳು ಸ್ಥಗಿತಗೊಂಡಿತ್ತು.
ಇನ್ನಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಣ್ಣಾಜಿಗೋಳಿಯ ಗಣಪತಿ ಹೆಗ್ಡೆ ಅವರಿಗೆ ಸೇರಿದ ಖಾಸಗಿ ಜಮೀನಿನಲ್ಲಿ ಮುನ್ಸೂಚನೆ ನೀಡದೆ ಸ್ಥಳೀಯರನ್ನು ವಿಶ್ವಾಸಕ್ಕೆ ಪಡೆಯದೇ ಜೆಸಿಬಿ ಯಂತ್ರದಿಂದ, ಟವರ್ ನಿರ್ಮಾಣಕ್ಕೆ ಮಂಗಳವಾರ ಹೊಂಡ ಅಗೆಯಲಾಗುತಿತ್ತು. ಕಾಮಗಾರಿಯ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು, ಟವರ್ ನಿರ್ಮಾಣ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು, ರೈತ ಸಂಘದ ಮುಖಂಡರು ಸ್ಥಳದಲ್ಲಿ ಜಮಾಯಿಸಿದರು.
ತರಾಟೆಗೆ: ತಹಶೀಲ್ದಾರ್ ಪ್ರದೀಪ್ ಆರ್., ಕಾಪು ಇನ್ಸ್ಪೆಕ್ಟರ್ ಜಯಶ್ರೀ ಮಾನೆ, ಪಡುಬಿದ್ರಿ ಎಸ್ಐ ಪ್ರಸನ್ನ ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಮುಖ್ಯಸ್ಥರು ಸ್ಥಳದಲ್ಲಿ ಹಾಜರಿದ್ದು, ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಈ ವೇಳೆ ಅಧಿಕಾರಿಗಳು, ಕಂಪನಿ ಮುಖ್ಯಸ್ಥರು ಹಾಗೂ ಸಿಬ್ಬಂದಿಯನ್ನು ಸ್ಥಳೀಯರು ಹಾಗೂ ಹೋರಾಟ ಸಮಿತಿ, ರೈತ ಸಂಘದ ಮುಖಂಡರು ತರಾಟೆಗೆ ತೆಗೆದುಕೊಂಡರು. ಯಾವುದೇ ಕಾರಣಕ್ಕೂ ಟವರ್ ನಿರ್ಮಾಣಕ್ಕೆ ಅವಕಾಶ ನೀಡುವುದಿಲ್ಲ. ಆರಂಭಿಸಿರುವ ಕಾಮಗಾರಿ ಸ್ಥಗಿತಗೊಳಿಸುವುದು ಮಾತ್ರವಲ್ಲದೆ ಹೊಂಡವನ್ನು ಮುಚ್ಚುವಂತೆ ಸ್ಥಳೀಯರು ಪಟ್ಟು ಹಿಡಿದರು.
ಹೋರಾಟಗಾರರೊಂದಿಗೆ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಸೇರಿಕೊಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು. ವಿರೋಧ ತೀವ್ರವಾದ ಹಿನ್ನೆಲೆ ಈ ಯೋಜನೆಯ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಲು 5 ದಿನಗಳ ಕಾಲಾವಕಾಶ ನೀಡಲಾಯಿತು.
ಕೃಷಿಗೆ ತೊಂದರೆ: ಇನ್ನಾ ಗ್ರಾಮದಲ್ಲಿ ಕೃಷಿ ನಂಬಿಕೊಂಡು ಬದುಕುವ ನೂರಾರು ಕುಟುಂಬಗಳಿವೆ. ಟವರ್ ನಿರ್ಮಾಣದಿಂದ ವಿದ್ಯುತ್ ಕೇಬಲ್ ಹಾದು ಹೋಗುವ ಕಡೆಗಳಲ್ಲಿ ಕೃಷಿ ಮಾಡಲು ಸಾಧ್ಯವಾಗುವುದಿಲ್ಲ. ಕೃಷಿಯನ್ನೇ ನಂಬಿಕೊಂಡ ನಮ್ಮಂತವರು ಏನು ಮಾಡಬೇಕು ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದರು.
ಅನ್ನ ಬೇಯಿಸಿ ಉಂಡರು: ಸ್ಥಳೀಯರ ಒತ್ತಡಕ್ಕೆ ಮಣಿದು ಕಂಪನಿಯವರು ಅಗೆದ ಹೊಂಡವನ್ನು ಮತ್ತೆ ಜೆಸಿಬಿಯಲ್ಲಿ ಸಹಾಯದಿಂದ ಮುಚ್ಚಿದರು. ಮತ್ತೇ ಕಾಮಗಾರಿ ಆರಂಭಿಸಬಹುದು ಎಂಬ ಆತಂಕದಲ್ಲಿ ಹೋರಾಟಗಾರರು ಅಲ್ಲೇ ಜಮಾಯಿಸಿ ಸ್ಥಳದಲ್ಲೇ ಅನ್ನ ತಯಾರಿಸಿದರು. ಅಲ್ಲಿಯೇ ಊಟ ಮಾಡಿ, ಸ್ಥಳದಲ್ಲೇ ಮುಂದಿನ ಹೋರಾಟದ ಚರ್ಚೆ ನಡೆಸಿದರು.
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಕಾರ್ಕಳ ತಹಶೀಲ್ದಾರ್ ಪ್ರದೀಪ್ ಆರ್., ‘ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಜಮೀನುದಾರರಿಗೆ ಹಾಗೂ ಹೋರಾಟಗಾರರಿಗೆ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸಲು 5 ದಿನಗಳ ಕಾಲಾವಕಾಶ ನೀಡಲಾಗಿದೆ. ಮುಂದಿನ ಆದೇಶದವರೆಗೆ ಕಾಮಗಾರಿ ಆರಂಭಿಸುವುದಿಲ್ಲ’ ಎಂದರು.
ಉಡುಪಿ ಕಾಸರಗೋಡು 400 ಕೆ.ವಿ ವಿದ್ಯುತ್ ಲೈನ್ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಅಮರನಾಥ್ ಶೆಟ್ಟಿ, ಕಾರ್ಯದರ್ಶಿ ಚಂದ್ರಹಾಸ್ ಶೆಟ್ಟಿ, ಜಯ ಎಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕುಶ ಆರ್ ಮೂಲ್ಯ, ರೇಶ್ಮಾ ಯು. ಶೆಟ್ಟಿ, ದೀಪಕ್ ಕಾಮತ್, ನಿತೇಶ್ ಪ್ರಸಾದ್ ಶೆಟ್ಟಿ, ಎಂ.ಪಿ. ಮೊಯಿದಿನಬ್ಬ, ಗಣಪತಿ ಹಡಗ್ಢ, ದಿನೇಶ್ ಕೋಟ್ಯಾನ್, ಭೂಮಿ ಸಂರಕ್ಷಣಾ ಸಮಿತಿಯ ಅಲ್ಪೋನ್ಸ್ ಡಿಸೋಜ, ರೈತ ಸಂಘದ ಮನೋಹರ್ ಶೆಟ್ಟಿ, ದಯಾನಂದ ಶೆಟ್ಟಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.