ಉಡುಪಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ಆಸುಪಾಸಿನಲ್ಲಿ ಯಾತ್ರಿಭವನ ನಿರ್ಮಿಸಲು ಕರ್ನಾಟಕ ಸರ್ಕಾರಕ್ಕೆ ಭೂಮಿ ಮಂಜೂರು ಮಾಡುವುದಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭರವಸೆ ನೀಡಿದ್ದಾರೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಿಳಿಸಿದರು.
ಸೋಮವಾರ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಶ್ರೀಗಳು, ‘ಅಯೋಧ್ಯೆಯಲ್ಲಿ ಯಾತ್ರಿಭವನ ನಿರ್ಮಾಣಕ್ಕೆ ಭೂಮಿ ಮಂಜೂರಾತಿ ಕೋರಿ ಹಲವು ರಾಜ್ಯಗಳಿಂದ ಬೇಡಿಕೆ ಬಂದಿದೆ. ಕರ್ನಾಟಕದಿಂದಲೂ ಮನವಿ ಬಂದಿದ್ದು, ಪರಿಶೀಲಿಸಿ ಭೂಮಿ ಕೊಡುವುದಾಗಿ ಆದಿತ್ಯನಾಥ್ ತಿಳಿಸಿದ್ದಾರೆ’ ಎಂದರು.
ಭೇಟಿ ವೇಳೆ, ಪೇಜಾವರ ಶ್ರೀಗಳ ಜತೆಗಿನ ಒಡನಾಟವನ್ನು ಹಂಚಿಕೊಂಡರು. ಮೂರು ವರ್ಷಗಳ ಹಿಂದೆ ಬೆಂಗಳೂರಿನ ವಿದ್ಯಾಪೀಠಕ್ಕೆ ಭೇಟಿ ನೀಡಿದ್ದ ಸಂದರ್ಭ ಸ್ಮರಿಸಿದರು. ಇದೇವೇಳೆ ಉಡುಪಿಯ ಕೃಷ್ಣಮಠ, ನೀಲಾವರದ ಗೋಶಾಲೆ ಹಾಗೂ ಬೆಂಗಳೂರಿನಲ್ಲಿ ಹಿರಿಯ ಗುರುಗಳ ವೃಂದಾವನ ಸ್ಥಳಕ್ಕೆ ಭೇಟಿ ನೀಡಬೇಕು ಎಂದು ಆದಿತ್ಯನಾಥ್ ಅವರಿಗೆ ಆಹ್ವಾನ ನೀಡಲಾಯಿತು ಎಂದು ಪೇಜಾವರ ಶ್ರೀಗಳು ತಿಳಿಸಿದರು.
ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಅಧ್ಯಕ್ಷರಾದ ಮಹಾಂತ ನೃತ್ಯ ಗೋಪಾಲ ದಾಸ್, ಮಣಿರಾಮ ಚಾವಣಿ ಅಯೋಧ್ಯ ಹಾಗೂ ಕಮಲ ನಯನ ದಾಸ್ ಅವರನ್ನು ಪೇಜಾವರ ಶ್ರೀಗಳು ಭೇಟಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.