ಉಡುಪಿ: ದಶಕಗಳ ಹಿಂದೆ ನಗರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮನೆ ನಿವೇಶನಗಳನ್ನು ಖರೀದಿಸಿದವರು ವಂಚನೆಗೆ ಸಿಲುಕಿ ಕಾನೂನು ತೊಡಕು ಎದುರಿಸುವಂತಾಗಿದ್ದು, ನ್ಯಾಯ ಕೊಡಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ನಗರಾಭಿವೃದ್ಧಿ ಪ್ರಾಧಿಕಾರದ ಎದುರು ಧರಣಿ ನಡೆಸಿದ ಸಂತ್ರಸ್ತರು ಪ್ರಾಧಿಕಾರದ ಅಧ್ಯಕ್ಷ ರಾಘವೇಂದ್ರ ಕಿಣಿ ಅವರಿಗೆ ಮನವಿ ಸಲ್ಲಿಸಿದರು.
1990 ಹಾಗೂ 2000ದಲ್ಲಿ ಹಲವರು ಕೃಷಿ ಭೂಮಿಯನ್ನು ಭೂಪರಿವರ್ತನೆಯ ಮೂಲಕ ವಸತಿ ಬಡಾವಣೆಗಳನ್ನಾಗಿ ಮಾರ್ಪಾಡು ಮಾಡಿ ಮಾರಾಟ ಮಾಡಿದ್ದರು. ಅವರಿಂದ ನೂರಾರು ಮಂದಿ ನಿವೇಶನ ಖರೀದಿ ಮಾಡಿದ್ದರು. ಬಡಾವಣೆಗಳ ನಿರ್ಮಾನ ಮಾಡುವಾಗ ಸಮುದಾಯದ ಉಪಯೋಗಕ್ಕೆ ಜಾಗ ಮೀಸಲಿಡದೆ ಮಾರಾಟ ಮಾಡಲಾಗಿತ್ತು. ನಿವೇಶನ ಖರೀದಿಯ ಬಳಿಕ ನೋಂದಣಿಯೂ ಆಗಿದ್ದರಿಂದ ಬಡಾವಣೆ ನಿಯಮಬದ್ಧವಾಗಿದೆ ಎಮದು ನಿವೇಶನದಾರರು ನಿಶ್ಚಿಂತೆಯಾಗಿದ್ದರು.
ಆದರೆ, ಈಗ ಕಂದಾಯ ಇಲಾಖೆ ನಿಯಮಗಳ ಉಲ್ಲಂಘನೆಯ ಆರೋಪವೊಡ್ಡಿ ಮನೆ ಕಟ್ಟಿಕೊಳ್ಳಲು ಬಿಡುತ್ತಿಲ್ಲ. ನಿವೇಶನ ಮಾಲೀಕರು ಅಕ್ರಮ ಎಸಗಿದ್ದು, ದಂಡ ಕಟ್ಟುವಂತೆ ಹಾಗೂ ನಿಯಮಾನುಸಾರ ಸಮುದಾಯಕ್ಕೆ ಮೀಸಲಾದ ಜಾಗವನ್ನು ಬಿಟ್ಟುಕೊಟ್ಟು ಸಕ್ರಮ ಮಾಡಿಸಿಕೊಳ್ಳುವಂತೆ ಸೂಚನೆ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯಲ್ಲಿ ಭೂಮಿ ನೋಂದಣಿಯಾಗಿ ಪ್ರಾಧಿಕಾರದ ವ್ಯಾಪ್ತಿಗೆ ತೆಗೆದುಕೊಳ್ಳುವಾಗ ನಿಯಮ ಉಲ್ಲಂಘನೆ ಅರಿವಿಗೆ ಬಾರದಿರುವುದು ದುರಂತ. ಕಂದಾಯ ಇಲಾಖೆಯ ಗಂಭೀರ ತಪ್ಪನ್ನು ಪ್ರಶ್ನಿಸುವ ಧೈರ್ಯವನ್ನು ನಗರಾಭಿವೃದ್ಧಿ ಪ್ರಾಧಿಕಾರ ತೋರುತ್ತಿಲ್ಲ. ಬದಲಾಗಿ ನಿವೇಶನದಾರರಿಗೆ ತೊಂದರೆ ಕೊಡಲಾಗುತ್ತಿದೆ ಎಂದು ದೂರಿದರು.
ನಿವೇಶನ ಖರೀದಿದಾರರು ಸಂತ್ರಸ್ತರೇ ವಿನಾ ಅಕ್ರಮ ಎಸಗಿಲ್ಲ. ಆದರೂ ಅಕ್ರಮ ಸಕ್ರಮದಡಿ ಹಲವರು ಅರ್ಜಿ ಸಲ್ಲಿಸಿದ್ದಾರೆ. 15 ವರ್ಷಗಳಿಂದಲೂ ನ್ಯಾಯಯುತ ಬೇಡಿಕೆಗೆ ಸ್ಪಂದನ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
15ರಿಂದ 20 ವರ್ಷ ಕಾನೂನು ತೊಡಕುಗಳನ್ನು ಬಗೆಹರಿಸಿಕೊಳ್ಳಲು ಹೋರಾಟ ಮಾಡುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಗಳಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಯಲಿದೆ ಎಂದು ಸಂತ್ರಸ್ತರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.