ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ರಸ್ತೆ ನಿರ್ವಹಣೆಗಾಗಿ ದೇಶದ ಮೊದಲ ಇ.ವಿ ಹೈವೇ ಪ್ಯಾಟ್ರೋಲ್ ರಾಜ್ಮಾರ್ಗ್ ಸಾಥಿ ವಾಹನಗಳನ್ನು ಶುಕ್ರವಾರ ಹೆಜಮಾಡಿ ಟೋಲ್ ಪ್ಲಾಝಾ ಬಳಿ ಲೋಕಾರ್ಪಣೆಗೊಳಿಸಲಾಯಿತು.
ಕುಂದಾಪುರ– ತಲಪಾಡಿವರೆಗೆ ರಾಷ್ಟ್ರೀಯ ಹೆದ್ದಾರಿ ಸುವ್ಯವಸ್ಥೆ ಕಾಪಾಡುವ ಮಹತ್ವದ ಉದ್ದೇಶದೊಂದಿಗೆ ಕೆ.ಕೆ.ಆರ್. ಹೈವೇ ಕನ್ಸ್ಟ್ರಕ್ಷನ್ ಸಂಸ್ಥೆಯ ಹೆಜಮಾಡಿಯ ಉಡುಪಿ ಟೋಲ್ವೇನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಆಜ್ಮಿ ಜಾವೇದ್ ಲೋಕಾರ್ಪಣೆಗೊಳಿಸಿದರು.
ಅವರು ಮಾತನಾಡಿ, ದೇಶದಾದ್ಯಂತ ಹೆದ್ದಾರಿ ಸುವ್ಯವಸ್ಥೆಗಾಗಿ ರಾಜ್ಮಾರ್ಗ್ ಸಾಥಿ ರಸ್ತೆ ಗಸ್ತು ವಾಹನವನ್ನು ಬಿಡುಗಡೆಗೊಳಿಸಲಾಗಿದೆ. ದೇಶದಲ್ಲೇ ಪ್ರಥಮ ಬಾರಿಗೆ ಉಡುಪಿ ಟೋಲ್ವೇ ಕಂಪನಿ ಮೂಲಕ ಸಾಸ್ತಾನ, ಹೆಜಮಾಡಿ, ತಲಪಾಡಿ ಟೋಲ್ ಪ್ಲಾಝಾ ಮೂಲಕ ಇವು ಕಾರ್ಯಾಚರಿಸಲಿವೆ ಎಂದು ತಿಳಿಸಿದರು.
ಸುಸಜ್ಜಿತ ರಾಜ್ಮಾಗ್ ಸಾಥಿ ವಾಹನ ದಿನವಿಡೀ ನಿರ್ದಿಷ್ಟ ಸಮಯದಲ್ಲಿ ತನ್ನ ವ್ಯಾಪ್ತಿಯಲ್ಲಿ ಸಂಚರಿಸಿ ರಸ್ತೆ ಹೊಂಡ, ಅಡೆತಡೆಗಳನ್ನು ಗುರುತಿಸಿ ತಕ್ಷಣ ತೆರವು ಮಾಡಿ ಸುಗಮ ಸಂಚಾರ ವ್ಯವಸ್ಥೆ ಮಾಡಿಕೊಡುತ್ತದೆ. ಪ್ರತಿದಿನ ಸಂಚರಿಸಿ ರಸ್ತೆಗಳ ಸ್ಥಿತಿಗತಿ ಮೇಲ್ವಿಚಾರಣೆ ನಡೆಸಿ, ಸ್ವತಃ ದುರಸ್ತಿ ನಡೆಸಿ ಸಂಬಂಧಪಟ್ಟವರಿಗೆ ವರದಿ ಮಾಡಲಿದೆ.
ಹೆದ್ದಾರಿ ಪ್ರಾಧಿಕಾರದ ಟೆಕ್ನಿಕಲ್ ಮ್ಯಾನೇಜರ್ ಕೆ. ಚಂದ್ರಶೇಖರ್, ಐಇ ಜ್ಞಾನೇಂದರ್ ಸಾಹು, ಎಐ ನವೀನ್, ಕೆಕೆಆರ್ ಟೋಲ್ ಪ್ಲಾಝಾದ ಉಪಾಧ್ಯಕ್ಷ ಅಣ್ಣಾಮಲೈ ಮುತ್ತು, ಪ್ರಾಜೆಕ್ಟ್ ಕೋ–ಆರ್ಡಿನೇಟರ್ ಆಶೀಲ್ ಪಾಟೀಲ್, ಪ್ರಾಜೆಕ್ಟ್ ಮ್ಯಾನೇಜರ್ ರೀತಮ್ ಗಂಗೂಲಿ, ಟೋಲ್ ಮ್ಯಾನೇಜರ್ ತಿಮ್ಮಯ್ಯ ಎ.ಎಸ್. ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.