ಉಡುಪಿ: ಬಡ ಮಕ್ಕಳ ವೈದ್ಯಕೀಯ ವೆಚ್ಚ ಭರಿಸಲು ಅಷ್ಟಮಿಯ ಸಂದರ್ಭ ಹಾಕಿದ ವೇಷವನ್ನು ಜನರು ಮೆಚ್ಚಿಕೊಂಡು 1.5 ಲಕ್ಷದಷ್ಟು ಧನಸಹಾಯ ಮಾಡಿದ್ದಾರೆ. ಈ ಹಣದಲ್ಲಿ ಬಡವರ ವೈದ್ಯಕೀಯ ವೆಚ್ಚ ಭರಿಸಲಾಗುವುದು ಎಂದು ನಮ್ಮ ಭೂಮಿ ಸಂಘಟನೆಯ ರಾಮಾಂಜಿ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 6 ವರ್ಷಗಳಿಂದ ವೇಷ ಧರಿಸುತ್ತಿದ್ದು, ಈ ವರ್ಷ ಹಾವುಗಳ ರಾಣಿ ಮೆಡೂಸ ವೇಷ ಧರಿಸಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿತ್ತು. ನಿರೀಕ್ಷೆಗೂ ಮೀರಿ ಬೆಂಬಲ ಸಿಕ್ಕಿದೆ. ಈ ಹಣವನ್ನು ಸೋನಿ ಶೆಟ್ಟಿಗಾರ್, ನೇತ್ರಾವತಿ ಎಂಬುವರಿಗೆ ನೀಡಲು ನಿರ್ಧರಿಸಲಾಗಿದೆ ಎಂದರು.
ಅ.14ರಂದು ಸಂಜೆ 4ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ದೇಣಿಗೆ ಸಮರ್ಪಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಮ್ಮಭೂಮಿ ದಿ ಕನ್ಸರ್ನ್ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ನಿವೃತ್ತ ಸಹಾಯಕ ನಿರ್ದೇಶಕ ಗಣಪತಿ, ಜಿಲ್ಲಾಧಿಕಾರಿ ಜಿ.ಜಗದೀಶ್, ಮಂಗಳೂರು ವಿವಿ ಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಎಡಪಡಿತ್ತಾಯ, ಎಸ್ಪಿ ನಿಶಾ ಜೇಮ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೋಹನ್ ಸಾಲಿಕೇರಿ, ನಿತಿನ್ ಪೂಜಾರಿ, ರಿಯಾನ್ ಶೇಖ್, ಪುರುಷೋತ್ತಮ್ ಕೋಟ್ಯಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.