ADVERTISEMENT

ಡಾ.ಎಸ್.ಚಂದ್ರಶೇಖರ ಶೆಟ್ಟಿಗೆ ಜೀವಮಾನ ಸಾಧನೆಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2021, 7:51 IST
Last Updated 4 ಜುಲೈ 2021, 7:51 IST
ಡಾ.ಚಂದ್ರಶೇಖರ ಶೆಟ್ಟಿ
ಡಾ.ಚಂದ್ರಶೇಖರ ಶೆಟ್ಟಿ   

ಕುಂದಾಪುರ: ಆದಿ ಚುಂಚನಗಿರಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಚಂದ್ರಶೇಖರ ಶೆಟ್ಟಿ ಅವರಿಗೆ ಆಲ್ ಇಂಡಿಯಾ ಓಫ್ಥಲ್ಮೊಲೋಜಿಕಲ್ (ನೇತ್ರ ವಿಜ್ಞಾನ) ಸೊಸೈಟಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದೆ.

ಶೆಟ್ಟಿ ಅವರು ಕುಂದಾಪುರ ತಾಲ್ಲೂಕಿನ ಕಾಳಾವರ ಗ್ರಾಮದವರು. ನೇತ್ರ ವಿಜ್ಞಾನ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ರಾಜ್ಯ ಘಟಕಗಳ ಶಿಫಾರಸು ಹಾಗೂ ವೈಯಕ್ತಿಕ ಸಾಧನೆಗಳನ್ನು ಪರಿಶೀಲಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಬೆಂಗಳೂರಲ್ಲಿ ವೈದ್ಯಕೀಯ ಶಿಕ್ಷಣ ಪಡೆದು ನೇತ್ರ ತಜ್ಞರಾಗಿ ಹಲವು ಅಂತರ ರಾಷ್ಟ್ರೀಯ ಮಟ್ಟದ ಸಾಧನೆ ಮಾಡಿರುವ ಡಾ.ಎಸ್.ಚಂದ್ರಶೇಖರ ಶೆಟ್ಟಿ ಅವರನ್ನು ಈ ಬಾರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಕರ್ನಾಟಕ ಮೆಡಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಬೆಂಗಳೂರು ಮೆಡಿಕಲ್ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಕುಲಪತಿ, ದೇವರಾಜ್ ಅರಸು ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಕುಲಪತಿಯಾಗಿ ಕಾರ್ಯನಿರ್ವಹಿಸಿದ್ದ ಅವರು ಪ್ರಸ್ತುತ ಆದಿ ಚುಂಚನಗಿರಿ ವಿಶ್ವ ವಿದ್ಯಾಲಯದ ಕುಲಪತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ADVERTISEMENT

ರೆಡ್‌ಕ್ರಾಸ್, ಲಯನ್ಸ್ ಫೌಂಡೇಷನ್ ಮೂಲಕ ದೇಶ ಹಾಗೂ ವಿದೇಶಗಳಲ್ಲೂ ಸೇವೆ ಸಲ್ಲಿಸಿರುವ ಇವರು, ಡಬ್ಲ್ಯೂಎಚ್ ಓ, ಕಾಮನ್‍ ವೆಲ್ತ್ ಫೌಂಡೇಷನ್ ಮುಂತಾದ ಅಂತರರಾಷ್ಟ್ರೀಯ ಒಕ್ಕೂಟಗಳ ಸಲಹೆಗಾರರಾಗಿದ್ದಾರೆ. ಕುಂದಾಪುರದ ಮಾಜಿ ಶಾಸಕ ಕಾಪು ಸಂಜೀವ ಶೆಟ್ಟಿ ಅವರ ಪುತ್ರ. ಕುಂದಾಪುರದ ಪ್ರಸಿದ್ಧ ವೈದ್ಯರಾಗಿದ್ದ ಡಾ.ವೈ.ಸೀತಾರಾಂ ಶೆಟ್ಟಿ ಅವರ ಅಳಿಯ. ಇವರು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಶಟಲ್‌, ಲಾನ್ ಟೆನಿಸ್ ಆಟಗಾರರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.