ಉಡುಪಿ: ಮಂಗಳೂರಿನಲ್ಲಿ ಈಚೆಗೆ ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಮೊಹಮ್ಮದ್ ಶಾರಿಕ್ ಅಕ್ಟೋಬರ್ನಲ್ಲಿ ಕೃಷ್ಣಮಠದ ರಥಬೀದಿಯಲ್ಲಿ ಅಡ್ಡಾಡಿದ್ದ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಶಾರಿಕ್ನ ಮೊಬೈಲ್ ಕರೆಗಳ ವಿವರಗಳನ್ನು ಪರಿಶೀಲಿಸಿದಾಗ ಆತನ ಮೊಬೈಲ್ನಿಂದ ಉಡುಪಿಯಿಂದ ಕರೆ ಹೋಗಿರುವುದು ತಿಳಿದು ಬಂದಿದೆ. ಈ ಮಾಹಿತಿಯ ಆಧಾರದಲ್ಲಿ ಮಂಗಳೂರು ಪೊಲೀಸರು ಕೃಷ್ಣಮಠದ ರಥಬೀದಿಗೆ ಬಂದು ಸುತ್ತಮುತ್ತಲಿನ ಅಂಗಡಿಗಳ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಅಂಗಡಿ ಮಾಲೀಕರಿಂದ ಮಾಹಿತಿ ಕಲೆ ಹಾಕಿದ್ದಾರೆ.
ಶಾರಿಕ್ ಮೊಬೈಲ್ ಬಳಸಿದ್ದ ವೃದ್ಧೆ ?
ರಥಬೀದಿಯಲ್ಲಿ ಅಡ್ಡಾಡುವ ವೃದ್ಧೆಯೊಬ್ಬರು ಶಾರಿಕ್ನ ಮೊಬೈಲ್ ಪಡೆದುಕೊಂಡು ಮೊಮ್ಮಗನಿಗೆ ಕರೆ ಮಾಡಿ ಮಾತನಾಡಿದ್ದು, ಕರೆ ಆಧಾರದ ಮೇಲೆ ಪೊಲೀಸರು ಉಡುಪಿಗೆ ಬಂದು ತನಿಖೆ ನಡೆಸಿದ್ದಾರೆ. ಅ.16ರಂದು ಉಡುಪಿಯ ರಥಬೀದಿಗೆ ಬಂದಿದ್ದ ಶಾರಿಕ್ ಬಳಿಕ ಕಾರ್ಕಳ ಮಾರ್ಗವಾಗಿ ಬಂಟ್ವಾಳಕ್ಕೆ ತೆರಳಿದ್ದಾನೆ. ಶಿವಮೊಗ್ಗದಲ್ಲಿ ನಡೆದ ಚೂರಿ ಇರಿತ ಪ್ರಕರಣದಲ್ಲಿ ಶಾರಿಕ್ ಆರೋಪಿಯಾಗಿದ್ದು ತಲೆ ಮರೆಸಿಕೊಂಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಈ ಮಧ್ಯೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕೃಷ್ಣಮಠಕ್ಕೆ ಹೆಚ್ಚಿನ ಭದ್ರತೆ ನೀಡಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.