ಉಡುಪಿ: ಶೀರೂರು ಮಠಕ್ಕೆ ಉತ್ತರಾಧಿಕಾರಿಯ ನೇಮಕ ಪ್ರಶ್ನಿಸಿ ಹೈಕೋರ್ಟ್ಗೆ ಸಲ್ಲಿಕೆಯಾಗಿದ್ದ ಅರ್ಜಿ ತಿರಸ್ಕೃತವಾಗಿರುವುದು ನ್ಯಾಯಕ್ಕೆ ಸಂದ ಜಯ ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ದ್ವಂದ್ವ ಮಠಾಧೀಶರ ನೆಲೆಯಲ್ಲಿ ಶೀರೂರು ಮಠದ ಆಡಳಿತವನ್ನು ಎರಡು ಮುಕ್ಕಾಲು ವರ್ಷ ಕಾಲ ನಿರ್ವಹಿಸಿ ಕಳೆದ ಮೇನಲ್ಲಿ ಶೀರೂರು ಮೂಲಮಠಕ್ಕೆ ವೇದವರ್ಧನ ತೀರ್ಥರನ್ನು ಮಠಾಧಿಪತಿಯನ್ನಾಗಿ ನೇಮಿಸಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ನಲ್ಲಿ ರಿಟ್ ಅರ್ಜಿ ಹಾಕಿದ್ದರು. ನ್ಯಾಯಾಲಯ ಅರ್ಜಿಯನ್ನು ಸುದೀರ್ಘವಾಗಿ ವಿಮರ್ಶಿಸಿ ತಿರಸ್ಕರಿಸಿರುವುದು ನ್ಯಾಯಕ್ಕೆ ಸಿಕ್ಕ ಜಯವಾಗಿದೆ ಎಂದು ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
800 ವರ್ಷಗಳಿಂದ ನಡೆದುಬಂದಿರುವ ಹಾಗೂ ಮೂಲಗುರು ಮಧ್ವಾಚಾರ್ಯರು ಹಾಕಿಕೊಟ್ಟ ಸಂಪ್ರದಾಯಕ್ಕೆ ನ್ಯಾಯಪೀಠ ಮುದ್ರೆ ಒತ್ತಿರುವುದು ಅತೀವ ಸಂತೋಷ ತಂದಿದೆ. ಮಠದ ಎಲ್ಲ ಕಾರ್ಯಚಟುವಟಿಕೆಗಳ ಪಾರದರ್ಶಕತೆಗೆ ಶ್ರೀಕೃಷ್ಣ ಮುಖ್ಯಪ್ರಾಣ, ಮಠದ ಪಟ್ಟದದೇವರಾದ ಭೂವರಾಹ ಹಯಗ್ರೀವ ದೇವರು ಮತ್ತು ವಾದಿರಾಜರು ಸಾಕ್ಷಿಯಾಗಿದ್ದಾರೆ ಎಂದು ವಿಶ್ವವಲ್ಲಭ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.