ಬಂಧನ
(ಸಾಂದರ್ಭಿಕ ಚಿತ್ರ)
ಉಡುಪಿ: ಹಿರಿಯಡ್ಕ ವ್ಯಾಪ್ತಿಯ ಶೇಡಿಗುಡ್ಡೆ ಎಂಬಲ್ಲಿ ಆಟೊ ಚಾಲಕರೊಬ್ಬರ ಮೇಲೆ ಗುರುವಾರ ರಾತ್ರಿ ದಾಳಿ ನಡೆಸಿ, ಕೊಲೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಹಿರಿಯಡ್ಕ ಬೊಮ್ಮರಬೆಟ್ಟುವಿನ ಸಂದೇಶ್ (31) ಮತ್ತು ಬಾಪೂಜಿ ದರ್ಖಾಸು ನಿವಾಸಿ ಸುಶಾಂತ್ (32) ಬಂಧಿತ ಆರೋಪಿಗಳು.
‘ಆತ್ರಾಡಿಯ ಅಬೂಬಕ್ಕರ್ ಎಂಬುವವರು ಬಾಡಿಗೆಗಾಗಿ ತೆರಳುತ್ತಿದ್ದಾಗ ಆತ್ರಾಡಿ ಪೆಟ್ರೋಲ್ ಬಂಕ್ ಬಳಿಯಿಂದ ಆರೋಪಿಗಳು ಬೈಕ್ನಲ್ಲಿ ಹಿಂಬಾಲಿಸಿ, ರಿಕ್ಷಾವನ್ನು ಅಡ್ಡಗಟ್ಟಲು ಯತ್ನಿಸಿದ್ದಾರೆ. ಬೈಕ್ನ ಹಿಂಬದಿ ಸವಾರನಲ್ಲಿ ತಲವಾರು ಇರುವುದನ್ನು ಗಮನಿಸಿದ ಅಬೂಬಕ್ಕರ್ ಅವರು ರಿಕ್ಷಾ ನಿಲ್ಲಿಸದೆ ಮುಂದೆ ಸಾಗಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.
‘ಆರೋಪಿಗಳು ಬಾಟಲಿಯಿಂದ ರಿಕ್ಷಾದ ಮುಂಭಾಗದ ಗಾಜಿಗೆ ಹೊಡೆದಿದ್ದು, ಈ ವೇಳೆ ಅಬೂಬಕ್ಕರ್ ಅವರು ರಿಕ್ಷಾ ನಿಲ್ಲಿಸಿ ಪಕ್ಕದಲ್ಲಿದ್ದ ಆವರಣಗೋಡೆ ಹಾರಿ ಓಡಿಹೋಗಿದ್ದಾರೆ’ ಎಂದು ಹೇಳಿದ್ದಾರೆ.
‘ಅಬೂಬಕ್ಕರ್ ಅವರು ಹಿರಿಯಡ್ಕ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಕೂಡಲೇ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ತಿಳಿಸಿದ್ದಾರೆ.
‘ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಈ ಕೃತ್ಯ ಎಸಗಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಎಸ್ಪಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.