ಉಡುಪಿ: ಮಾದಕ ವಸ್ತು ಪ್ರಕರಣಗಳಲ್ಲಿ ಬೆಂಗಳೂರು ನಗರವು ಮೊದಲ ಸ್ಥಾನದಲ್ಲಿದ್ದರೆ, ಮಂಗಳೂರು ಎರಡನೇ ಸ್ಥಾನದಲ್ಲಿದೆ. ಅನಂತರದ ಸ್ಥಾನದಲ್ಲಿ ಉಡುಪಿ ಜಿಲ್ಲೆ ಇದ್ದು, ಇದು ಕಳವಳಕಾರಿ ಸಂಗತಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಹೇಳಿದರು.
ಉಡುಪಿ ಜಿಲ್ಲಾ ಪೊಲೀಸ್ ವತಿಯಿಂದ ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿ ರಚಿಸುವ ಸಲುವಾಗಿ ನಗರದ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ನಶೆಯಿಂದ ಉಷೆಯೆಡೆಗೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳ ಸೇವನೆ ಚಟಕ್ಕೆ ಯಾಕೆ ಒಳಗಾಗುತ್ತಿದ್ದಾರೆ ಎಂಬುದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸುವ ಅಗತ್ಯ ಇದೆ. ಈ ನಿಟ್ಟಿನಲ್ಲಿ ಪಿಯುಸಿ ಹಾಗೂ ಅದಕ್ಕಿಂತ ಮೇಲಿನ ಕಾಲೇಜುಗಳಲ್ಲಿ ಮಾದಕ ವಸ್ತು ವಿರೋಧಿ ಸಮಿತಿ ರಚಿಸಬೇಕು. ಪ್ರಾಂಶುಪಾಲರು, ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಈ ಸಮಿತಿಯಲ್ಲಿರಬೇಕು ಎಂದು ಅವರು ವಿವರಿಸಿದರು.
ಕಾಲೇಜುಗಳು ಯಾವ ಪೊಲೀಸ್ ಠಾಣಾ ವ್ಯಾಪ್ತಿಗಳಿಗೆ ಬರುತ್ತದೋ ಆ ಠಾಣೆಗಳ ಪಿಐ ಅಥವಾ ಎಸ್ಐ ಸಮಿತಿಗೆ ನೋಡಲ್ ಅಧಿಕಾರಿಯಾಗಿರುತ್ತಾರೆ. ಪ್ರತೀ ತಿಂಗಳು ಈ ಸಮಿತಿಯ ಸಭೆ ನಡೆಸಬೇಕು ಮತ್ತು ಆ ಸಭೆಗೆ ಪೊಲೀಸ್ ಠಾಣೆಯ ಸಿಬ್ಬಂದಿಯನ್ನು ಕರೆಸಬೇಕು ಎಂದು ಹೇಳಿದರು.
ಮೂರು ತಿಂಗಳುಗಳಿಗೊಮ್ಮೆ ನೋಡಲ್ ಅಧಿಕಾರಿಯನ್ನು ಸಭೆಗೆ ಕರೆಸಬೇಕು. ಕಾಲೇಜಿನಲ್ಲಿ ತಿಂಗಳಿಗೊಮ್ಮೆ ಸಣ್ಣ ಮಟ್ಟದಲ್ಲಾದರೂ ಮಾದಕ ವಸ್ತು ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚಿಸಿದರು.
ಮಾದಕ ವಸ್ತು ವಿಷಯಕ್ಕೆ ಸಂಬಂಧಿಸಿ ಕಾಲೇಜುಗಳಿಂದ ನೀಡುವ ಮಾಹಿತಿಯನ್ನು ಗೋಪ್ಯವಾಗಿಡಲಾಗುವುದು. ಕಾಲೇಜು ಮತ್ತು ವಿದ್ಯಾರ್ಥಿಗಳ ಹೆಸರನ್ನೂ ಬಹಿರಂಗಪಡಿಸುವುದಿಲ್ಲ ಎಂದೂ ತಿಳಿಸಿದರು.
ಪಿಯುಸಿ ಮತ್ತು ಅದಕ್ಕಿಂತ ಮೇಲಿನ ಕಾಲೇಜುಗಳಲ್ಲಿ ಈ ಸಮಿತಿಯು ವಿದ್ಯಾರ್ಥಿಗಳಿಂದ ಒಪ್ಪಿಗೆ ಪತ್ರ ಪಡೆದುಕೊಳ್ಳಬೇಕು ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಶೇ 10 ರಷ್ಟು ವಿದ್ಯಾರ್ಥಿಗಳನ್ನು ಡ್ರಗ್ಸ್ ಪರೀಕ್ಷೆಗೆ ಒಳಪಡಿಸಬೇಕು ಎಂದು ಹೇಳಿದರು.
ಡ್ರಗ್ಸ್ ಪರೀಕ್ಷೆಯಲ್ಲಿ ಯಾವುದಾದರೂ ವಿದ್ಯಾರ್ಥಿ ಮಾದಕ ವಸ್ತು ಸೇವಿಸಿರುವುದು ದೃಢಪಟ್ಟರೆ ಆ ವಿದ್ಯಾರ್ಥಿಯನ್ನು ಆಪ್ತ ಸಮಾಲೋಚನೆಗೆ ಒಳಪಡಿಸಬೇಕು ಎಂದರು.
ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಹರ್ಷಾ ಪ್ರಿಯಂವಧಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ನಾಯಕ್, ಡಿವೈಎಸ್ಪಿ ಪ್ರಭು ಡಿ.ಟಿ. ಉಪಸ್ಥಿತರಿದ್ದರು.
ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಸ್ವಾಗತಿಸಿದರು. ಡಿಎಆರ್ ಸಿಬ್ಬಂದಿ ಯೋಗೀಶ್ ನಿರೂಪಿಸಿದರು.
ಮಾದಕ ವಸ್ತುಗಳ ಪೂರೈಕೆ ಜಾಲಗಳನ್ನು ಹಿಡಿಯುವುದೇ ನಮ್ಮ ಮೂಲ ಉದ್ದೇಶ. ಪೆಡ್ಲರ್ಗಳ ಬಗ್ಗೆ ಮಾಹಿತಿ ಸಿಕ್ಕಿದರೆ ಕಾಲೇಜಿನವರು ಪೊಲೀಸರಿಗೆ ನೀಡಬೇಕುಹರಿರಾಂ ಶಂಕರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ
ಯುವ ಸಮುದಾಯವು ಮಾದಕ ವಸ್ತುಗಳ ಸೇವನೆಯ ದುಷ್ಚಟಕ್ಕೆ ಒಳಗಾಗುತ್ತಿರುವುದು ಇಡೀ ಪ್ರಪಂಚಕ್ಕೆ ಸವಾಲಾದ ವಿಷಯವಾಗಿದೆ. ಪೋಷಕರಿಗೆ ತಮ್ಮ ಮಕ್ಕಳ ಬಗ್ಗೆ ಶ್ರದ್ಧೆ ವಹಿಸಲು ಸಮಯವಿಲ್ಲದಿರುವುದು ಕೂಡ ಮಕ್ಕಳು ದಾರಿ ತಪ್ಪಲು ಕಾರಣವಾಗಿದೆ ಎಂದು ಉಡುಪಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಸಂಘದ ಅಧ್ಯಕ್ಷ ವರ್ಗೀಸ್ ಪಿ. ಹೇಳಿದರು.
ಕಾಲೇಜುಗಳಲ್ಲಿ ಪೋಷಕರ ಸಭೆ ಕರೆದರೆ ಹೆಚ್ಚಿನವರು ಬರುವುದೇ ಇಲ್ಲ. ಮಾದಕ ವಸ್ತು ಸಮಸ್ಯೆಯನ್ನು ಬೇರು ಸಮೇತ ಕಿತ್ತು ಹಾಕಬೇಕಾದರೆ ಪೋಷಕರೂ ತಮ್ಮ ಮಕ್ಕಳ ಮೇಲೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.