ಶಿರ್ವ: ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲ್ಲೂಕು ಘಟಕದ ವತಿಯಿಂದ ಡಿ.10ರಂದು ಕಟಪಾಡಿಯ ಎಸ್ವಿಎಸ್ ಪದವಿಪೂರ್ವ ಕಾಲೇಜು ಆವರಣದಲ್ಲಿ ನಡೆಯಲಿರುವ ಕಾಪು ತಾಲ್ಲೂಕು ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಬಹುಭಾಷಾ ಸಾಹಿತಿ ಕ್ಯಾಥರಿನ್ ರೊಡ್ರಿಗಸ್ ಕಟಪಾಡಿ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನೇತೃತ್ವದ ಜಿಲ್ಲಾ ಕಾರ್ಯಕಾರಿ ಸಮಿತಿ ಇವರನ್ನು ಆಯ್ಕೆ ಮಾಡಿದೆ ಎಂದು ಕಸಾಪ ಕಾಪು ತಾಲ್ಲೂಕು ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ತಿಳಿಸಿದ್ದಾರೆ.
ಕ್ಯಾಥರಿನ್ ರೊಡ್ರಿಗಸ್ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರರಾಗಿದ್ದು, ಕನ್ನಡ, ತುಳು, ಕೊಂಕಣಿಯಲ್ಲಿ ಸಾಮಾಜಿಕ ಕಾಳಜಿ ಹಾಗೂ ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಕಥೆ, ಕವನ, ಕಾದಂಬರಿ, ನಾಟಕ, ಲೇಖನ, ನುಡಿಚಿತ್ರಗಳ ಕೃಷಿ ಮಾಡಿರುತ್ತಾರೆ. ವಿವಿಧ ಪತ್ರಿಕೆಗಳಲ್ಲಿ ಅವರ ಬರೆಹಗಳು ಪ್ರಕಟವಾಗಿರುತ್ತವೆ. 57 ತುಳು ನಾಟಕಗಳನ್ನು ರಚನೆ ಮಾಡಿರುತ್ತಾರೆ.
ಹಲವಾರು ತುಳು, ಕೊಂಕಣಿ ಸಾಹಿತ್ಯವನ್ನು ಇಂಗ್ಲಿಷಿಗೆ ಭಾಷಾಂತರ ಮಾಡಿರುವ ಇವರು, ಕಟಪಾಡಿ ಕಲಾವಾಹಿನಿ ಸಂಸ್ಥೆಯ ಮೂಲಕ ಅನೇಕ ನಾಟಕಗಳನ್ನು ನಿರ್ದೇಶನ ಮಾಡಿರುತ್ತಾರೆ. ಇವರ ಬರೆದ ‘ಕಬೇಧಿ’ ತುಳು ನಾಟಕವು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರದರ್ಶನಗೊಂಡು ಹಲವಾರು ಪ್ರಶಸ್ತಿಗಳನ್ನು ಗಳಿಸಿದೆ. ಇವರು ಬರೆದಿರುವ ಸಿರಿತುಪ್ಪೆ, ಕೇದಗೆ ಕೃತಿಗಳು ಯುವ ಬರಹಗಾರರಿಗೆ ತುಳುನಾಡಿನ ಜಾನಪದ ಸಂಸ್ಕೃತಿಯ ಬಗ್ಗೆ ಒಲವು ಮೂಡಿಸುವಂತಿದೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.