ಉಡುಪಿ: ಶ್ರೀಕೃಷ್ಣ ಮಠದಲ್ಲಿ ಅದ್ಧೂರಿ ಚೂರ್ಣೋತ್ಸವ (ಹಗಲು ತೇರು) ಬುಧವಾರ ನೆರವೇರುವುದರೊಂದಿಗೆ ವಾರ್ಷಿಕ ಸಪ್ತೋತ್ಸವಕ್ಕೆ ತೆರೆ ಬಿತ್ತು.
ರಥಬೀದಿಯಲ್ಲಿ ಸೇರಿದ್ಧ ಜನರು ಭಕ್ತಿಪರವಶತೆಯಿಂದ ರಥ ಎಳೆದು ಭಕ್ತಿ ಮೆರೆದರು. ವಿದೇಶಿಯರು ಸೇರಿದಂತೆ ನೂರಾರು ಮಂದಿ ಹಗಲು ರಥೋತ್ಸವವನ್ನು ಕಣ್ತುಂಬಿಕೊಂಡರು.
ಕೃಷ್ಣನ ಉತ್ಸವ ಮೂರ್ತಿಯನ್ನು ಚಿನ್ನದ ಪಲ್ಲಕ್ಕಿಯಲ್ಲಿ ತಂದು ಬ್ರಹ್ಮರಥದಲ್ಲಿ ಪ್ರತಿಷ್ಠಾಪಿಸಲಾಯಿತು. ಬಳಿಕ ದೇವರಿಗೆ ಪೂಜೆ, ನೈವೇದ್ಯ ಸಮರ್ಪಿಸಿ ಮಹಾ ಮಂಗಳಾರತಿ ನೇರವೇರಿಸಿದ ನಂತರ ಬ್ರಹ್ಮ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಚಂಡೆ, ಮಂಗಳವಾದ್ಯ, ವೇದ ಘೋಷಗಳೊಂದಿಗೆ ಭಕ್ತರ ಜಯಘೋಷ ಮುಗಿಲು ಮುಟ್ಟಿತು.
ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ಹಾಗೂ ಕಿರಿಯ ಯತಿ ಸುಶ್ರೀಂದ್ರತೀರ್ಥ ಸ್ವಾಮೀಜಿ ಅವರು ರಥದ ಮೆಟ್ಟಿಲಲ್ಲಿ ನಿಂತು ಪ್ರಸಾದವನ್ನು ಜನರತ್ತ ತೂರಿದರು. ಪ್ರಸಾದಕ್ಕಾಗಿ ಭಕ್ತರು ಮುಗಿಬಿದ್ದರು.
ಬ್ರಹ್ಮರಥವು ರಥಬೀದಿಯಲ್ಲಿ ಒಂದು ಸುತ್ತು ಬಂದ ಬಳಿಕ ಮಧ್ವ ಸರೋವರದಲ್ಲಿ ಕೃಷ್ಣ ಮುಖ್ಯಪ್ರಾಣ, ಉತ್ಸವ ಮೂರ್ತಿಗೆ ಅವಭೃತ ಸ್ನಾನ ನೆರವೇರಿಸಲಾಯಿತು.
ಅದಮಾರು ಮಠದ ಹಿರಿಯ ಯತಿ ವಿಶ್ವಪ್ರಿಯತೀರ್ಥ ಶ್ರೀಪಾದರು, ವಿಶೇಷ ಆಮಂತ್ರಿತರಾಗಿದ್ದ ಮಥುರಾ ವೃಂದಾವನ ಶ್ರೀರಾಧಾರಮಣ ಮಂದಿರದ ಗೌಡೀಯ ಮಾಧ್ವ ಸಂಪ್ರದಾಯದ ಶ್ರೀಮನ್ಮಧ್ವಗೌಡೇಶ್ವರ ಆಚಾರ್ಯ ಪುಂಡರೀಕ ಗೋಸ್ವಾಮಿ, ತನ್ಮಯ ಗೋಸ್ವಾಮಿ, ಮಠದ ದಿವಾನ ನಾಗರಾಜ ಆಚಾರ್ಯ, ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರಸನ್ನಾಚಾರ್ಯ ಭಾಗವಹಿಸಿದ್ದರು.
ಸಪ್ತೋತ್ಸವದ ಅಂಗವಾಗಿ ಮಂಗಳವಾರ ರಾತ್ರಿ ತ್ರಿರಥೋತ್ಸವ ಜರುಗಿತ್ತು. ಈ ವೇಳೆ ಸುರಿದ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ಭಕ್ತರು ಪಾಲ್ಗೊಂಡಿದ್ದರು. ರಥೋತ್ಸವದ ಬಳಿಕ ಓಲಪೂಜೆ, ಪಲ್ಲಪೂಜೆ ಅನಂತರ ಓಕುಳಿ ನಡೆಯಿತು. ಚೂರ್ಣೋತ್ಸವ ಅಂಗವಾಗಿ ನಡೆದ ಅನ್ನಸಂತರ್ಪಣೆಯಲ್ಲಿ ಸುಮಾರು 10 ಸಾವಿರ ಮಂದಿ ಭೋಜನ ಪ್ರಸಾದ ಸ್ವೀಕರಿಸಿದರು ಎಂದು ಮಠದ ಮೂಲಗಳು ತಿಳಿಸಿವೆ.
ಗೌಡೀಯ ಮಾಧ್ವ ಪರಂಪರೆಯ ಮೂಲಸ್ಥಾನ ಉಡುಪಿ. ನನ್ನ ಜೀವನದಲ್ಲಿ ವೃಂದಾವನದಷ್ಟೇ ಉಡುಪಿಯೂ ಮಹತ್ವ ಪಡೆದಿದೆ-ಪುಂಡರೀಕ, ಗೋಸ್ವಾಮಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.