ಸಿದ್ದಾಪುರ: ಅಡಿಕೆಯನ್ನು ನಿಷೇಧ ಮಾಡುವ ಕ್ರಮವನ್ನು ನಿಲ್ಲಿಸಬೇಕು ಮತ್ತು ಆ ರೀತಿಯ ಪ್ರಸ್ತಾವವನ್ನು ಭವಿಷ್ಯದಲ್ಲಿಯೂ ಕೈಗೊಳ್ಳಕೂಡದು ಎಂದು ಸ್ಥಳೀಯ ವಕೀಲರ ಸಂಘದ ಸದಸ್ಯರು ಕೇಂದ್ರ ಸರ್ಕಾರವನ್ನು ಆಗ್ರಹಿಸಿದರು.
ಪಟ್ಟಣದ ನ್ಯಾಯಾಲಯದಿಂದ ತಹಶೀಲ್ದಾರ್ ಕಚೇರಿಯವರೆಗೆ ಮಂಗಳವಾರ ಪಾದಯಾತ್ರೆ ನಡೆಸಿದ ವಕೀಲರು, ಕೊನೆಯಲ್ಲಿ ಸ್ಥಳೀಯ ತಹಶೀಲ್ದಾರ್ ಅವರ ಮೂಲಕ ಪ್ರಧಾನಿಗೆ ಈ ಬಗ್ಗೆ ಮನವಿ ಸಲ್ಲಿಸಿದರು.
ರಾಜ್ಯವೂ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಈ ಅಡಿಕೆ ತೋಟಗಳು ಅನಾದಿ ಕಾಲದಿಂದ ಇದ್ದು, ದೊಡ್ಡ ಸಂಖ್ಯೆಯ ರೈತರು ಅಡಿಕೆಯ ಮೇಲೆ ಅವಲಂಬಿತರಾಗಿದ್ದಾರೆ. ಕೇಂದ್ರ ಸರ್ಕಾರ ಅಡಿಕೆಯನ್ನು ನಿಷೇಧ ಮಾಡಲು ಇಚ್ಛಿಸಿದೆ ಎಂದು ವರದಿಯಾಗಿದ್ದು, ಈ ಕ್ರಮ ಕೈಗೊಂಡಲ್ಲಿ ಅಡಿಕೆ ಬೆಳೆಯುವ ಪ್ರದೇಶಗಳ ರೈತರ ಮೇಲೆ ಅತ್ಯಂತ ಗಂಭೀರ ಪರಿಣಾಮ ಗಳು ಉಂಟಾಗುತ್ತವೆ. ಇದರಿಂದ ಅಡಿಕೆ ಬೆಳೆಗಾರರಿಗೆ ತಮ್ಮ ಕುಟುಂಬ ದೊಂದಿಗೆ ಸಾವಿಗೆ ಶರಣಾಗದೇ ಬೇರೆ ದಾರಿ ಉಳಿಯದು.
ಕೇಂದ್ರ ಸರ್ಕಾರದ ಮುಂದೆ ಅಡಿಕೆ ನಿಷೇಧದ ಪ್ರಸ್ತಾವ ಇದ್ದಲ್ಲಿ ಅದನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯ ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಪಾಟೀಲ, ಉಪಾಧ್ಯಕ್ಷ ಎಸ್.ಎಂ.ನಾಯ್ಕ, ಕಾರ್ಯದರ್ಶಿ ಕೆ.ಜಿ.ನಾಯ್ಕ, ಖಜಾಂಚಿ ಎಸ್.ಜಿ.ಹೆಗಡೆ, ಹಿರಿಯ ವಕೀಲರಾದ ರವಿ ಹೆಗಡೆ ಹೂವಿನಮನೆ, ಎನ್.ಡಿ.ನಾಯ್ಕ, ಆರ್.ಎಂ.ಹೆಗಡೆ ಬಾಳೇಸರ, ಜೆ.ಪಿ.ಎನ್.ಹೆಗಡೆ, ಎಸ್.ಆರ್.ಹೆಗಡೆ ,ಜಿ.ಎಸ್.ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಸಭೆ ಮತ್ತು ಬೆಂಬಲ: ಮನವಿ ಸಲ್ಲಿಕೆಗೂ ಮೊದಲು ಸಂಘದ ಕಾರ್ಯಾಲಯದಲ್ಲಿ ಸಭೆ ನಡೆಸಿದ ವಕೀಲರು, ಅಡಿಕೆ ನಿಷೇಧ ವಿರೋಧಿಸಿ ನಿರ್ಣಯ ಕೈಕೊಂಡರು. ಇದರೊಂದಿಗೆ ನ್ಯಾಯಾಲಯದ ಕಲಾಪದಿಂದಲೂ ದೂರ ಉಳಿದರು. ಅಡಿಕೆ ನಿಷೇಧ ವಿರೋಧಿಸಿ ಇದೇ 18ರಂದು ನೀಡಲಾಗಿರುವ ಸಿದ್ದಾಪುರ ಬಂದ್ಗೆ ವಕೀಲರ ಸಂಘ ಬೆಂಬಲ ನೀಡಿದೆ ಎಂದು ಸಂಘದ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.